ಈ ಘಟನೆ ನಡೆದಿರುವುದುರು ಆಗ್ರಾದ ಸಮೀಪದ ದವ್ಲಿ ಎಂಬ ಗ್ರಾಮದಲ್ಲಿ. ಮಂಗಳವಾರ ರಾತ್ರಿ ತಾಯಿ (ಭೂದೇವಿ) ತನ್ನ ಕೋಣೆಯೊಂದರಲ್ಲಿ ಮಲಗಿದ್ದ ವೇಳೆ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಆಕೆಯ ಮಗ ರಘುನಾಥ್ ಅಲ್ಲಿಗೆ ಬಂದಿದ್ದಾನೆ ಮತ್ತು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಮತ್ತೆ ತನ್ನ ಕೋಣೆಗೆ ತೆರಳಿ ನಿರಾಂತಕವಾಗಿ ನಿದ್ದೆ ಹೋಗಿದ್ದಾನೆ. ಘಟನೆ ನಡೆದ ಸಮಯದಲ್ಲಿ ಮೃತಳ ಉಳಿದ ಮೂವರು ಮಕ್ಕಳಾದ ಜಗದೀಶ್, ರತನ್, ರಘುವೀರ್ ಪ್ರತ್ಯೇಕ ಕೋಣೆಯೊಂದರಲ್ಲಿ ಮಲಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆ ವೇಳೆ ರಘುನಾಥ್ ತನ್ನ ಆರೋಪವನ್ನು ಒಪ್ಪಿಕೊಂಡಿದ್ದಾನೆ ಮತ್ತು ಹತ್ಯೆಗೆ ಬಳಸಿದ್ದ ಆಯುಧವನ್ನು ಸಹ ತೋರಿಸಿದ್ದಾನೆ. ಪೊಲೀಸರ ಪ್ರಕಾರ ಅವಿವಾಹಿತನಾಗಿರುವ ಆರೋಪಿ ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಆತನಿಗೆ ಔಷಧೋಪಚಾರ ಜಾರಿಯಲ್ಲಿದೆ. ಆತ ಮಾನಸಿಕ ಅಸ್ವಸ್ಥತೆಯ ಪರಿಣಾಮವಾಗಿ ಈ ಕೃತ್ಯವನ್ನೆಸಗಿದನೋ ಅಥವಾ ಕೃತ್ಯದ ಹಿಂದೆ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.