ಪತ್ನಿಯನ್ನು ಸ್ನೇಹಿತನಿಗೆ ಒತ್ತೆಯಿಟ್ಟು 30 ಸಾವಿರ ರೂಪಾಯಿ ಸಾಲ ಪಡೆದ ಪತಿ ಮಹಾಶಯ

ಮಂಗಳವಾರ, 17 ನವೆಂಬರ್ 2015 (17:48 IST)
ವಿಚಿತ್ರ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ 30 ಸಾವಿರ ರೂಪಾಯಿಗಳ ಸಾಲಕ್ಕಾಗಿ ಸ್ನೇಹಿತನ ಬಳಿ ಪತ್ನಿಯನ್ನೇ ಅಡವಿಟ್ಟ ಹೇಯ ಘಟನೆ ವರದಿಯಾಗಿದೆ.
 
ಪತ್ನಿಯನ್ನು ಅಡವಿಟ್ಟ ವ್ಯಕ್ತಿ ಮೊಹಮ್ಮದ್ ಗುಲಾಮ್, ಕೆಲ ತಿಂಗಳುಗಳ ನಂತರ 30 ಸಾವಿರ ರೂಪಾಯಿಗಳನ್ನು ಮರುಪಾವತಿ ಮಾಡಲು ಬಂದಾಗ, ಸ್ನೇಹಿತ ಹೆಚ್ಚಿನ ಹಣ ಕೇಳಿದ್ದರಿಂದ ಕೋಪಗೊಂಡು ಸ್ನೇಹಿತನನ್ನೇ ಹತ್ಯೆ ಮಾಡಿದ ಘಟನೆ ಯಮುನಾ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 
ಮೊಹಮ್ಮದ್ ಗುಲಾಂ ಬಿಹಾರ್ ರಾಜ್ಯದ ಆರ್ರಿಯಾ ಜಿಲ್ಲೆಯವನಾಗಿದ್ದು ಸುಮಾರು ಎರಡುವರೆ ವರ್ಷಗಳಿಂದ ಯಮುನಾನಗರದಲ್ಲಿ ವಾಸವಾಗಿದ್ದನು. ಕಳೆದ ಜನೆವರಿ ತಿಂಗಳಲ್ಲಿ ಟಿಫನ್ ಸೇವೆ ಮತ್ತು ಗುತ್ತಿಗೆದಾರರಿಗೆ ಕಾರ್ಮಿಕರನ್ನು ಒದಗಿಸುತ್ತಿದ್ದ ತನ್ನ ಗೆಳೆಯ ಸಬೀರ್ ಅಲಿಗೆ 30 ಸಾವಿರ ರೂಪಾಯಿಗಳನ್ನು ಸಾಲವಾಗಿ ನೀಡಿದ್ದನು ಎನ್ನಲಾಗಿದೆ. 
 
ಪೊಲೀಸರ ಪ್ರಕಾರ, ಸಬೀರ್ 30 ಸಾವಿರ ರೂಪಾಯಿಗಳ ಸಾಲಕ್ಕಾಗಿ ತನ್ನ ಪತ್ನಿ ಸಲ್ಮಾಳನ್ನು ಮೊಹಮ್ಮದ್ ಗುಲಾಂ ಬಳಿ ಅಡವಿಟ್ಟು ಹೋಗಿದ್ದ. ನಂತರ ಗುಲಾಂ ಬಿಹಾರ್‌ನಲ್ಲಿನ ತನ್ನ ಮನೆಗೆ ಸಲ್ಮಾಳನ್ನು ಕರೆದುಕೊಂಡು ಹೋಗಿದ್ದ ಎಂದು ಮೂಲಗಳು ತಿಳಿಸಿವೆ.  
 
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೊಹಮ್ಮದ್ ಗುಲಾಂ ಮತ್ತು ಸಲ್ಮಾ ಯಮುನಾ ನಗರಕ್ಕೆ ವಾಪಸಾಗಿದ್ದರು. ಆಕ್ಟೋಬರ್ 31 ರವರೆಗೆ ಜೊತೆಯಾಗಿದ್ದರು. ಆದರೆ, ಮಾರನೇ ದಿನವೇ ಮೊಹಮ್ಮದ್ ಗುಲಾಂ ಹತ್ಯೆಯಾಗಿದ್ದನು.
 
ಆರೋಪಿ ಸಬೀರ್ ಪ್ರಕಾರ, ಮೊಹಮ್ಮದ್ ಗುಲಾಂನಿಂದ ಪಡೆದ 30 ಸಾವಿರ ರೂಪಾಯಿಗಳನ್ನು ಹಿಂತಿರುಗಿಸಲು ಹೋದಾಗ ಇನ್ನೂ 20 ಸಾವಿರ ರೂಪಾಯಿಗಳ ಬಡ್ಡಿಯನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಅದರಂತೆ ಹೆಚ್ಚುವರಿಯಾಗಿ 20 ಸಾವಿರ ರೂಪಾಯಿಗಳನ್ನು ಪಾವತಿಸಿದರೂ ಪತ್ನಿ ಸಲ್ಮಾಳನ್ನು ಕಳುಹಿಸಲು ಮೊಹಮ್ಮದ್ ಗುಲಾಂ ನಿರಾಕರಿಸಿದ್ದಾನೆ.
 
ಇದರಿಂದ ಕೋಪಗೊಂಡು ಪತ್ನಿ ಸಲ್ಮಾ ಜೊತೆ ಸೇರಿ ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಸಬೀರ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಎಸ್‌ಪಿ ರಾಜೀಂದರ್ ಕುಮಾರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ