ಪತ್ನಿಯ ಪ್ರಿಯತಮನಿಗೆ 20 ಬಾರಿ ಇರಿದು ಕೊಂದ

ಗುರುವಾರ, 17 ನವೆಂಬರ್ 2016 (14:24 IST)
ಪತಿಯೊಬ್ಬ ತನ್ನ ಪತ್ನಿಯ ಪ್ರಿಯತಮನನ್ನು 20 ಬಾರಿ ಇರಿದು ಬರ್ಬರವಾಗಿ ಕೊಂದು ಹಾಕಿದ ಘಟನೆ ನವದೆಹಲಿಯ ನಿಹಾರ್ ವಿಹಾರ‌ ಪ್ರದೇಶದಲ್ಲಿ ಶನಿವಾರ ನಡೆದಿದೆ. ಆರೋಪಿ ಕಬೀರ್(28) ಈಗ ಪೊಲೀಸರು ವಶದಲ್ಲಿದ್ದಾನೆ.

ಮೃತನನ್ನು ನರೇಶ್ ದಾಸ್ (26) ಎಂದು ಗುರುತಿಸಲಾಗಿದೆ.  ದವಡೆ, ತಲೆ, ಎದೆ, ಮುಖಕ್ಕೆ ಆತ ಪ್ರತಿರೋಧಿಸುವದನ್ನು ನಿಲ್ಲಿಸುವವರೆಗೂ ಚುಚ್ಚಿದ ಕಬೀರ್ ಕೊನೆಗೆ ಬಯಲೊಂದರಲ್ಲಿ ಆತನ ಶವವನ್ನು ಎಸೆದಿದ್ದಾನೆ. 
 
ಘಟನೆ ವಿವರ: 
 
ಕಬೀರ್ ಪತ್ನಿ ಮತ್ತು ನರೇಶ್ ದಾಸ್ ಶೂ ಉತ್ಪಾದನಾ ಕಂಪನಿಯೊಂದರಲ್ಲಿ ದಾಸ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದರೂ ಆಕೆ ಗಂಟೆಗಟ್ಟಲೆ ಆತನೊಂದಿಗೆ ಫೋನ್‌ನಲ್ಲಿ ಸಂಭಾಷಣೆ ನಡೆಸುತ್ತಿರುತ್ತಿದ್ದಳು. ಕೆಲ ತಿಂಗಳಿಂದ ಇದು ನಡೆದು ಬಂದಿತ್ತು.
 
ಹಲವು ಬಾರಿ ಎಚ್ಚರಿಕೆ ನೀಡಿದರೂ ಅವರಿಬ್ಬರು ಅದಕ್ಕೆ ಕ್ಯಾರೇ ಅಂದಿರಲಿಲ್ಲ. ಅಷ್ಟೇ ಅಲ್ಲದೆ ಇತ್ತೀಚಿಗೆ ನರೇಶ್ ತಾನಿಲ್ಲದಿದ್ದಾಗ ತನ್ನ ಮನೆಗೆ ಬಂದು ಹೋಗುತ್ತಿದುದು ಕಬೀರ್‌ಗೆ ತಿಳಿದು ಬಂತು.
 
ಇದೆಲ್ಲದರಿಂದ ಬೇಸತ್ತ ಕಬೀರ್ ತನ್ನ ಪತ್ನಿಯ ಮೊಬೈಲ್ ಫೋನ್‌ನಲ್ಲಿ ರಹಸ್ಯವಾಗಿ ಮೆಮೊರಿ ಕಾರ್ಡ್‌ನ್ನು ಹಾಕಿಟ್ಟ. ಆಕೆಯ ದ್ರೋಹವನ್ನು ಪತ್ತೆ ಹಚ್ಚುವುದು ಆತನ ಉದ್ದೇಶವಾಗಿತ್ತು. ಆಕೆ ರಾತ್ರಿ ಮಲಗಿದ ಬಳಿಕ ಆ ಚಿಪ್‌ನ್ನು ತೆಗೆದು ಆತ ಪರೀಕ್ಷಿಸುತ್ತಿದ್ದ. 
 
ನವೆಂಬರ್ 8 ರಂದು ಅವರಿಬ್ಬರು ಅತಿಯಾದ ಸಲಿಗೆಯಿಂದ ಫೋನ್ ಸಂಭಾಷಣೆ ನಡೆಸಿದ್ದನ್ನು ಕೇಳಿದ ಕಬೀರ್, ತನ್ನ ಕೌಟುಂಬಿಕ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿರುವ ಕಬೀರ್‌ನನ್ನು ಮುಗಿಸಲು ಯೋಜಿಸಿದ. 
 
ದಾಸ್ ಜತೆಗೆ ಸ್ನೇಹದಿಂದ ಮಾತನಾಡಲು ಆರಂಭಿಸಿದ ಕಬೀರ್, ಒಂದು ದೊಡ್ಡ ಚಾಕುವನ್ನು ತಂದು ಅಡಗಿಸಿಟ್ಟ. ನವೆಂಬರ್ 11 ರಂದು ದಾಸ್ ತನ್ನ ಮನೆಗೆ ಬಂದುದನ್ನು ನೋಡಿದ ಆತ ಕೋಪದ ಭರದಲ್ಲಿ ಆತನನ್ನು ಕೊಲ್ಲಲು ನಿರ್ಧರಿಸಿದ. 
 
ನವೆಂಬರ್ 12ರಂದು ಆತನನ್ನು ಮದ್ಯ ಕುಡಿಯಲು ಹೋಗೋಣವೆಂದು ಕರೆದೊಯ್ದ ಆತ ಕಂಠಪೂರ್ತಿ ಕುಡಿಸಿ ನಿಮ್ಮಿಬ್ಬರ ಅನೈತಿಕ ಸಂಬಂಧದ ಬಗ್ಗೆ ನನಗೆ ಗೊತ್ತು ಎಂದ. ಅಪಾಯದ ಸೂಚನೆಯನ್ನು ಪಡೆದ ದಾಸ್ ಅಲ್ಲಿಂದ ಓಡಿ ಹೋಗಲು ಯತ್ನಿಸಿದ. ಆದರೆ ಆತನನ್ನು ಹಿಡಿದುಕೊಂಡ ಕಬೀರ್ ಚಾಕುವಿನಿಂದ ಕೊನೆಯಸಿರೆಳೆಯುವವರೆಗೂ ತಿವಿದ. ಅಷ್ಟೇ ಅಲ್ಲದೇ ತನ್ನ ಪತ್ನಿಗೆ ತೋರಿಸುವ ಉದ್ದೇಶದಿಂದ ಆತ ರಕ್ತದ ಮಡುವಿನಲ್ಲಿ ಬಿದ್ದ ಫೋಟೋವನ್ನು ಸಹ ಪಡೆದುಕೊಂಡ. ಆದರೆ ಬಳಿಕ ತನ್ನ ಪತ್ನಿಗೆ ಕೊಲೆ ರಹಸ್ಯವನ್ನು ತಿಳಿಸುವುದು ಬೇಡವೆಂದು ನಿರ್ಧರಿಸಿದ.
 
ದಾಸ್ ಶವವಾಗಿ ಸಿಕ್ಕ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಕೇವಲ ನಾಲ್ಕು ದಿನಗಳಲ್ಲಿ ಪ್ರಕರಣವನ್ನು ಬೇಧಿಸಲು ಯಶ ಕಂಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ