ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು ಉಗ್ರ ಅಫ್ಜಲ್ ಗುರು ಅವರನ್ನು ಇಂದು ಸ್ಮರಿಸಿಕೊಂಡಿದ್ದು, ಗುರು ಸಂಸತ್ ದಾಳಿ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಸಾಬೀತಾಗಿರಲಿಲ್ಲ. ಆದರೆ ಗುರು ಅವರನ್ನು ಗಲ್ಲಿಗೇರಿಸಲಾಗಿದೆ. ಇದರಿಂದ ನಾನು ಬೇಸರಗೊಂಡಿದ್ದೆ ಎನ್ನುವ ಮೂಲಕ ಉಗ್ರನ ಪರ ವಕಾಲತ್ತು ವಹಿಸಿ ಮಾತನಾಡಿದ್ದು, ಚರ್ಚೆಗೆ ಗ್ರಾಸವಾಗಿದ್ದಾರೆ.
ಮಾಧ್ಯಮಗಳಿಗೆ ಮಾತನಾಡಿದ ಅವರು, ಸಂಸತ್ ಭವನದ ಮೇಲೆ ಐದು ಮಂದಿ ಉಗ್ರರು ನಡೆಸಿದ್ದ ದಾಳಿಯ ಮೇಲಿನ ಆರೋಪದಲ್ಲಿ ಅಫ್ಜಲ್ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆಯಲ್ಲಿಯೇ ಆತನನ್ನು ಗಲ್ಲಿಗೇರಿಸಲಾಗಿದೆ. ಪ್ರಕರಣದಲ್ಲಿ ಗುರು ಆರೋಪಿ ಎಂದು ಸಾಬೀತಾಗಿರಲಿಲ್ಲ. ಆದರೆ ಅವರನ್ನು ಗಲ್ಲಿಗೇರಿಸಲಾಗಿದೆ. ಅವರ ಕುಟುಂಬಕ್ಕೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ನಾನು ಅವರನ್ನು ಆಗಾಗ ಸ್ಮರಿಸಿಕೊಳ್ಳುತ್ತಲೇ ಇರುತ್ತೇನೆ. ಅಲ್ಲದೆ ಇದರಿಂದ ನನಗೆ ಬೇಸರವಾಗಿತ್ತು ಎಂದು ಉಗ್ರ ಅಫ್ಜಲ್ ಗುರು ಅವರ ಪರವಾಗಿ ಮಣಿಶಂಕರ್ ಅಯ್ಯರ್ ಮಾತನಾಡಿದ್ದು, ಪ್ರಸ್ತುತ ಚರ್ಚೆಗೆ ಗ್ರಾಸವಾಗಿದ್ದಾರೆ.
ಅಫ್ಜಲ್ ಗುರು ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 2013ರ ಜ.26ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗುರು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. ಬಳಿಕ 2013ರ ಫೆ.11ರ ಬೆಳಗ್ಗೆ 8 ಗಂಟೆ ಸಮಯದಲ್ಲಿ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. 2004ರಲ್ಲಿ ಸುದೀರ್ಘ ವಿಚಾರಣೆಯ ನಂತರ ಸುಪ್ರೀಂಕೋರ್ಟ್ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿತ್ತು.