ರಸಗುಲ್ಲಕ್ಕಾಗಿ ಮುರಿದುಬಿತ್ತು ಮದುವೆ

ಶನಿವಾರ, 20 ಮೇ 2017 (11:55 IST)
ಸಿಹಿತಿನಿಸು ರಸಗುಲ್ಲದ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ ಮದುವೆಯೊಂದು ಮುರಿದು ಬಿದ್ದಿರುವ ಘಟನೆ ನಡೆದಿದೆ.
 
ಲಖನೌನ ಕರ್ಮಾಪುರ ಗ್ರಾಮದಲ್ಲಿ ಮದುವೆ ನಡೆಯಬೇಕಿತ್ತು. ಅದೇ ಊರಿನವರಾದ ವಧುವಿನ ಕಡೆಯವರು ಇದಕ್ಕಾಗಿ ಭಾರಿ ಸಿದ್ಧತೆ ಮಾಡಿಕೊಂಡಿದ್ದರು. ವರನ ಕಡೆಯವರೂ ಜೋರಾದ ಮೆರವಣಿಗೆಯಲ್ಲೇ ಕರ್ಮಾಪುರಕ್ಕೆ ಬಂದಿದ್ದರು.
 
ಮದುವೆಯ ಶಾಸ್ತ್ರಕ್ಕೂ ಮುನ್ನ ವರನ ಬಂಧುಗಳಿಗಾಗಿ ಉಪಾಹಾರ ಏರ್ಪಡಿಸಲಾಗಿದ್ದು, ಉಪಾಹಾರಕ್ಕಾಗಿ ರಸಗುಲ್ಲವನ್ನೂ ಸಿದ್ಧಪಡಿಸಲಾಗಿತ್ತು. ವರನ ಬಂಧುವೊಬ್ಬರು ಎರಡು ರಸಗುಲ್ಲಗಳನ್ನು ಬಡಿಸಿಕೊಂಡಿದ್ದಾರೆ. ಅದನ್ನು ಗಮನಿಸಿದ ವಧುವಿನ ಬಂಧು, ಒಬ್ಬರಿಗೆ ಒಂದೇ ರಸಗುಲ್ಲ ಎಂದು ಹೇಳಿದ್ದಾರೆ. ಇದರಿಂದ ಮಾತಿನ ಚಕಮಕಿ ನಡೆದು ವಧು-ವರರ ಸಂಬಂಧಿಗಳ ನಡುವೆ ಹಲ್ಲೆ ನಡೆದು,ತಟ್ಟೆ-ಲೋಟಗಳನ್ನು ಎಸೆದಾಡಿ, ತಿಂಡಿ ತಿನಿಸುಗಳನ್ನೂ ಚೆಲ್ಲಾಡಿದ್ದಾರೆ.  
 
ಅಂತಿಮವಾಗಿ ಪಂಚಾಯಿತಿ ನಡೆದಾಗ ವಧು, ಇಂತಹ ಗೂಂಡಾಗಳ ಮನೆಗೆ ಸೊಸೆಯಾಗಿ ಹೋಗಲು ನನಗೆ ಇಷ್ಟವಿಲ್ಲ ಎಂದು ಮದುವೆಯನ್ನು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ