ಪೆನ್‌ನ್ನು ಪೊರಕೆಯಾಗಿ ಪರಿವರ್ತಿಸಿದಿರಿ: ಮಾಧ್ಯಮಗಳನ್ನು ಅಭಿನಂದಿಸಿದ ಮೋದಿ

ಶನಿವಾರ, 25 ಅಕ್ಟೋಬರ್ 2014 (16:44 IST)
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಮಾಧ್ಯಮದವರಿಗಾಗಿ  ದೀಪಾವಳಿ ಮಿಲನ ಸಮಾರಂಭ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ,  ಪೆನ್‌ನ್ನು ಪೊರಕೆಯಾಗಿ ಪರಿವರ್ತಿಸಿದಿರಿ ನಿಮಗೆ ಧನ್ಯವಾದಗಳು.  ಮಾಧ್ಯಮದವರ ಜತೆಗಿನ ಸಂಬಂಧಗಳನ್ನು ಮತ್ತಷ್ಟು ಗಾಢವಾಗಿಸಲು ತಾವು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. 

ಕಳೆದೊಂದು ತಿಂಗಳಿಂದ ನಡೆಸುತ್ತಿರುವ ಸ್ವಚ್ಛತಾ ಅಭಿಯಾನಕ್ಕೆ ಮಾಧ್ಯಮದವರು ನೀಡುತ್ತಿರುವ ಅಭೂತಪೂರ್ವ ಸಹಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. 
 
ಪ್ರಧಾನಿಯಾದ ನಂತರ ಮೋದಿಯವರು ಮಾಧ್ಯಮದವರೊಂದಿಗೆ ನಡೆಸಿದ ಮೊದಲ ಸಭೆ ಇದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ "ಮಾಧ್ಯಮದೊಂದಿಗಿನ ನನ್ನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇನೆ" ಎಂದರು.
 
ಸ್ವಚ್ಛ ಭಾರತ ಅಭಿಯಾನದ ಕುರಿತು ಮಾತನಾಡಿದ ಮೋದಿ, "ಕಳೆದೊಂದು ತಿಂಗಳಿಂದ  ಸ್ವಚ್ಛತೆಯ ಕುರಿತಾಗಿ ಪತ್ರಿಕೆಗಳಲ್ಲಿ ಪ್ರಕಟವಾದ ಅನೇಕ ಲೇಖನಗಳನ್ನು ನೋಡಿದ್ದೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಈ ಕುರಿತು  ಬಹಳ ಚರ್ಚೆಗಳು ನಡೆಯುತ್ತಿವೆ. ಕ್ಲೀನ್ ಇಂಡಿಯಾ ಅಭಿಯಾನಕ್ಕೆ ಬೆಂಬಲ ನೀಡಿದ  ಮಾಧ್ಯಮದವರಿಗೆ ನಾನು ಧನ್ಯವಾದಗಳನ್ನು ಹೇಳ ಬಯಸುತ್ತೇನೆ. ನೀವು ಪೆನ್‌ನ್ನು ಪೊರಕೆಯಾಗಿ ಪರಿವರ್ತಿಸಿದಿರಿ" ಎಂದು ಹೇಳಿದರು. 
 
ಈ ವರ್ಷ ಮಾಧ್ಯಮದವರೊಂದಿಗೆ ನಾನು ನಿಕಟ ಸಂಬಂಧವನ್ನು ಹೊಂದಿದ್ದೇನೆ," ಎಂದ ಪ್ರಧಾನಿ ಪತ್ರಕರ್ತರೊಂದಿಗಿನ ತಮ್ಮ ಹಳೆಯ ಸಂಬಂಧಗಳನ್ನು ಸಹ ಉಲ್ಲೇಖಿಸಿದರು. 
 
ದೀಪಾವಳಿ ಹಾಗೂ ಭಾಯ್‌ದೂಜ್ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಪ್ರಧಾನಿ ಶುಭಾಶಯ ಕೋರಿದರು.

ವೆಬ್ದುನಿಯಾವನ್ನು ಓದಿ