ಗಡುವಿನೊಳಗೆ ಯೋಜನೆಗಳನ್ನು ಪೂರ್ಣಗೊಳಿಸಿ: ಸಚಿವರಿಗೆ ಮೋದಿ ತಾಕೀತು

ಗುರುವಾರ, 18 ಫೆಬ್ರವರಿ 2016 (17:40 IST)
ಯೋಜನೆಗಳನ್ನು ನಿಗದಿತ ಗಡುವಿನೊಳಗೆ ಪೂರೈಸುವಂತೆ ಪ್ರಧಾನಿ ಮೋದಿಯವರು ತಮ್ಮ ಸರ್ಕಾರದ ಸಚಿವರಿಗೆ ಸಲಹೆ ನೀಡಿದ್ದಾರೆ. 

ಬುಧವಾರ ಸಂಜೆ ತಮ್ಮ ಸಂಪುಟದ ಸಚಿವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸರ್ಕಾರ ಯೋಜನೆಗಳನ್ನು ಪ್ರಕಟಿಸಿದಾಗ ಜನರ ನಿರೀಕ್ಷೆ ಹೆಚ್ಚುತ್ತದೆ. ವಿಶೇಷವಾಗಿ ಸಾಮಾಜಿಕ ವಲಯದ ಯೋಜನೆಗಳನ್ನು ಅಂತಿಮ ಗಡುವಿನೊಳಗೆ ಮುಗಿಸಿಬಿಡಿ. ಯಾವ ಕಾರಣಕ್ಕೂ ವಿಳಂಬ ಮಾಡಬೇಡಿ ಎಂದು ಆದೇಶಿಸಿದ್ದಾರೆ. 
 
ವ್ಯಾಪಕ ಪ್ರಚಾರದಿಂದಾಗಿ ಯುಪಿಎ ಸರ್ಕಾರದಲ್ಲಿನ ಯೋಜನೆಗಳು ಜನಮಾನಸದಲ್ಲಿ ತಾಜಾ ಆಗಿ ಉಳಿದುಕೊಂಡಿವೆ ಎಂದು ಸಚಿವರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಮೋದಿಯವರು ನೀವು ಯಥಾರ್ಥಪೂರ್ಣ ಪ್ರಸ್ತಾವನೆಗಳನ್ನು ನೀಡಲು ಸಫಲರಾದರೆ ಸರ್ಕಾರ ಜಾಹೀರಾತುಗಳ ಮೂಲಕ ತನ್ನ ಸಾಧನೆಗಳನ್ನು ಹೈಲೈಟ್ ಮಾಡಿಕೊಳ್ಳಹುದು ಎಂದು ಉತ್ತರಿಸಿದ್ದಾರೆ. 
 
ಜನರು ಅಂತಿಮ ಫಲಿತಾಂಶವನ್ನು ಗಮನವಿಟ್ಟು ನೋಡುತ್ತಿರುತ್ತಾರೆ. ಜನರ ನಿರೀಕ್ಷೆಗಳಲ್ಲಿ ಉಳಿದುಕೊಳ್ಳಬೇಕಾದರೆ ನಾವು ಅಂತಿಮ ಗಡುವುಗಳನ್ನು ಮೀರಬಾರದು ಎಂದು ತಮ್ಮ ಸಹೋದ್ಯೋಗಿಗಳಿಗೆ ಮೋದಿ ಕಿವಿಮಾತು ಹೇಳಿದ್ದಾರೆ.  
 
ತಮ್ಮ ಮಹಾತ್ವಾಕಾಂಕ್ಷೆಯ ಯೋಜನೆ ಸ್ವಚ್ಛ ಭಾರತ್ ಅಭಿಯಾನದಲ್ಲಿ ಮಾಡಿರುವ ಪ್ರಗತಿ ಬಗ್ಗೆ ಹೆಚ್ಚಿನ ಆಸಕ್ತಿ ತೋರಿ ಅವರು ಮಾತನಾಡಿದರು. 

ವೆಬ್ದುನಿಯಾವನ್ನು ಓದಿ