ಭಯೋತ್ಪಾದನೆ ನಮ್ಮ ದೇಶದ ಉತ್ಪನ್ನವಲ್ಲ, ಅದನ್ನು ಭಾರತಕ್ಕೆ ರಫ್ತು ಮಾಡಲಾಗಿದೆ, ಭಾರತದ ಮುಸ್ಲಿಮರು ಅಲ್ ಖೈದಾವನ್ನು ಕೂಡ ವಿಫಲಗೊಳಿಸುತ್ತಾರೆ ಎಂದು ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿದೇಶಿ ಸಂಬಂಧಗಳ ಪರಿಷತ್ತಿನ ಪ್ರಶ್ನೆಗೆ ಉತ್ತರಿಸುತ್ತಿದ್ದ ಮೋದಿ, ಭಾರತ ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಭಾರತದ ಮೂಲ ತತ್ವವಾದ ಗಾಂಧಿ ಮತ್ತು ಬುದ್ಧ ಬೋಧಿಸಿದ ಅಹಿಂಸೆ ಎಲ್ಲರನ್ನು ಸೆಳೆದುಕೊಳ್ಳುತ್ತದೆ ಎಂದರು.
"ಕಳೆದ 40 ವರ್ಷಗಳಿಂದ ನಾವು ಭಯೋತ್ಪಾದನೆಯ ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ. ಇದು ಕಲ್ಪಿಸಲಾಗದ ವಿಕೃತಿ. ಪತ್ರಕರ್ತನ ಕುತ್ತಿಗೆಯನ್ನು ಸೀಳುವ ಭೀಕರ ದೃಶ್ಯವನ್ನು ನಾವು ದೂರದರ್ಶನದಲ್ಲಿ ನೋಡಿದೆವು. 21 ನೇ ಶತಮಾನದಲ್ಲಿ ಕೂಡ ನಮ್ಮ ಕಣ್ಮುಂದೆ ಇಂತಹ ಘೋರ ಅಪರಾಧವನ್ನು ಮಾಡಲಾಗುತ್ತಿದೆ. ಆದರೆ ಇಲ್ಲಿಯವರೆಗೂ ನಾವಿದರ ವಿರುದ್ಧ ಸವಾಲೆಸೆದಿಲ್ಲ. ನಾವು ಮಾನವೀಯತೆಯಲ್ಲಿ ನಂಬಿಕೆ ಇಡಬೇಕು. ನಾವು ಜತೆಯಾಗಿ ಸಾಗಬೇಕು. ಭಯೋತ್ಪಾದನೆ ಮಾನವೀಯತೆಯ ಶತ್ರು. ಮಾನವತ್ವದಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ಜತೆಗೂಡಿ ಆತಂಕವಾದದ ವಿರುದ್ಧ ಯುದ್ಧ ಸಾರಬೇಕು" ಎಂದು ಅವರು ಕರೆ ನೀಡಿದ್ದಾರೆ.