ನವದೆಹಲಿ: ನರೇಂದ್ರ ಮೋದಿ ಸಂಸದೀಯ ಮಂಡಳಿ ನಾಯಕರಾಗಿ ಭಾಷಣ ಮಾಡುತ್ತಾ, ತಮ್ಮನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಹಿರಿಯ ಮುಖಂಡ ವಾಜಪೇಯಿಯವನ್ನು ನೆನೆದು ಮೋದಿ ಒಂದು ಕ್ಷಣ ಭಾವುಕರಾದರು. ಅವರ ಆಶೀರ್ವಾದದಿಂದಲೇ ನಾನು ಈ ಸ್ಥಾನಕ್ಕೆ ಏರಿದ್ದೇನೆ ಎಂದು ಹೇಳಿದರು. ಅಡ್ವಾಣಿ, ರಾಜ್ನಾಥ್ ಅವರಿಗೆ ಆಭಾರಿಯಾಗಿದ್ದೇನೆ.
ಪಕ್ಷದ ಮುಖಂಡರು ನನ್ನನ್ನು ಭುಜದ ಮೇಲೆ ಕೂರಿಸಿಕೊಂಡಿದ್ದರು ಎಂದು ನೆನೆದರು. ಪ್ರಚಾರದ ವೇಳೆ ನಿಜಭಾರತದ ದರ್ಶನವಾಗಿದೆ. ಮೈ ಮೇಲೆ ಬಟ್ಟೆ ಇಲ್ಲದಿದ್ದರೂ ಹೆಗಲ ಮೇಲೆ ಬಿಜೆಪಿ ಧ್ವಜ ಇದ್ದಿದ್ದನ್ನು ಕಂಡಿದ್ದೇನೆ. ಹುದ್ದೆಗಿಂತ ಜವಾಬ್ದಾರಿ ನಿರ್ವಹಿಸುವುದು ಮುಖ್ಯ. ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಬಡ ಕುಟುಂಬದ ವ್ಯಕ್ತಿ ನಿಮ್ಮ ಮುಂದೆ ನಿಂತಿದ್ದೇನೆ. ಇದು ಪ್ರಜಾಪ್ರಭುತ್ವದ ತಾಖತ್ತು.ಸಂವಿಧಾನದ ಶಕ್ತಿ. ಬಡವರ ದನಿಯನ್ನು ಸರ್ಕಾರ ಕೇಳಬೇಕು.
ನಾನು ಪ್ರಚಾರದಲ್ಲಿ ಕೋಟ್ಯಂತರ ಜನರನ್ನು ನೋಡಿದ್ದೇನೆ. ಭಾರತ ನನ್ನ ತಾಯಿ, ಅಂತೆಯೇ ಬಿಜೆಪಿಯೂ ನನ್ನ ತಾಯಿ. ನಾನು ಸ್ವಭಾವತಃ ಆಶಾವಾದಿ, ನಿರಾಶೆ ಎನ್ನುವುದು ನನ್ನ ಡಿಎನ್ಎಯಲ್ಲೇ ಇಲ್ಲ ಎಂದು ಮೋದಿ ನುಡಿದರು. ಪ್ರತಿಯೊಬ್ಬರಿಗೆ ಕಷ್ಟಗಳು ಬರುತ್ತವೆ. ಆದರೆ ಹೆದರಬಾರದು.