ಮೋದಿ ಅಲೆ ಸುನಾಮಿಯಾಗಿ ಮಾರ್ಪಟ್ಟಿದೆ : ಅಮಿತ್ ಶಾ

ಸೋಮವಾರ, 20 ಅಕ್ಟೋಬರ್ 2014 (16:35 IST)
ಮಹಾರಾಷ್ಟ್ರ ಮತ್ತು ಹರಿಯಾಣಾದಲ್ಲಿ ಭಾರತೀಯ ಜನತಾಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ,  ನರೇಂದ್ರ ಮೋದಿ ಅಲೆ ಸುನಾಮಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಶಾ  “ಮೋದಿ ಸುನಾಮಿ ಈಗಲೂ ಪೂರ್ಣ ಶಕ್ತಿಯೊಂದಿಗೆ ಅಸ್ತಿತ್ವದಲ್ಲಿದೆ. ಇತ್ತೀಚಿಗೆ ನಡೆದ ಉಪಚುನಾವಣೆ ಫಲಿತಾಂಶದ ಬಳಿಕ ಮೋದಿ ಅಲೆ ಮುಗಿಯಿತು ಎಂದು ಟೀಕೆ ಮಾಡಿದವರಿಗೆ ಈ ಚುನಾವಣಾ ಫಲಿತಾಂಶ ತಕ್ಕ ಉತ್ತರವನ್ನು ನೀಡಿದೆ. ಪ್ರಧಾನಿ ಮೋದಿ ನಮ್ಮ ನಿರ್ವಿವಾದ ನಾಯಕ ಎಂದು ದೇಶ ಒಪ್ಪಿಕೊಂಡಿದೆ ಎಂದರು.
 
ಇದು ಎರಡು ರಾಜ್ಯಗಳಲ್ಲಿ ಬಿಜೆಪಿಗೆ ಸಿಕ್ಕಿದ ದೊಡ್ಡ ಗೆಲುವಾಗಿದೆ ಎಂಬುದನ್ನವರು ಒತ್ತಿ ಹೇಳಿದರು. 
 
ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನು ಕೂಡಾ ಪಡೆಯಲಾರದು. ಕೈ ಎರಡು ರಾಜ್ಯಗಳಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದು ಅವರು ಟೀಕಿಸಿದ್ದಾರೆ. 
 
ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಅಭಿಯಾನ ಪ್ರಾರಂಭವಾಗಿದೆ. ಹರಿಯಾಣಾ ಮತ್ತು ಮಹಾರಾಷ್ಟ್ರದ ಜನತೆಗೆ ಧನ್ಯವಾದಗಳು .ಎರಡು ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಬಿಜೆಪಿ ಸರಕಾರ  ಜನರ ನಿರೀಕ್ಷೆಗಳನ್ನು ಈಡೇರಿಸುವ ದಿಶೆಯಲ್ಲಿ ಪ್ರಯತ್ನಿಸಲಿದೆ.  
 
ಮಹಾರಾಷ್ಟ್ರ ಮತ್ತು ಹರಿಯಾಣಾದ ಜನತೆ ಉತ್ತಮ ಆಡಳಿತ ನೀಡಬೇಕಾದ ಜವಾಬ್ದಾರಿಯನ್ನು ಬಿಜೆಪಿಗೆ ನೀಡಿವೆ ಎಂದು ಮೋದಿ ಆಪ್ತರಾದ ಶಾ ಅಭಿಪ್ರಾಯ ಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ