ಪ್ರಧಾನಿ ನರೇಂದ್ರ ಮೋದಿ ಸಾಕ್ಷಾತ್ ಶ್ರೀರಾಮ ದೇವರಿದ್ದಂತೆ: ಬಿಜೆಪಿ ಸಂಸದ

ಗುರುವಾರ, 28 ಜನವರಿ 2016 (19:19 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕ್ಷಾತ್ ಶ್ರೀರಾಮ ದೇವರಿದ್ದಂತೆ ಎಂದು ಬಾಲಿವುಡ್ ನಟ ಬಿಜೆಪಿ ಸಂಸದ ಪರೇಶ್ ರಾವಲ್ ಹೊಗಳಿದ್ದಾರೆ.
 
ನಿರ್ಮಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾವಲ್, ಕಲ್ಲುಗಳ ಮೇಲೆ ರಾಮ ಎಂದು ಬರೆದ ಮಾತ್ರಕ್ಕೆ ಸಮುದ್ರದಲ್ಲಿ ತೇಲಿದಂತೆ, ಮೋದಿ ಹೆಸರಿನಿಂದಲೇ ಬಿಜೆಪಿ 2014ರ ಲೋಕಸಭೆ ಚುನಾವಣೆ ಗೆಲ್ಲುವಂತಾಯಿತು ಎಂದಿದ್ದಾರೆ. 
 
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಕುರಿತಂತೆ ಮಾತನಾಡಿದ ಅವರು, ಸುರಕ್ಷತಾ ಪಡೆಗಳಿಂದ ಸುತ್ತುವರಿದವರು, ಐಷಾರಾಮಿ ಕಾರುಗಳಲ್ಲಿ ಸಂಚರಿಸುವ ವ್ಯಕ್ತಿಗಳು ಅಸಹಿಷ್ಣುತೆ ಬಗ್ಗೆ ಮಾತನಾಡುವುದು ಅಚ್ಚರಿ ತಂದಿದೆ ಎಂದರು.
 
ಬಾಲಿವುಡ್ ಚಿತ್ರರಂಗದಲ್ಲಿ ಲಾಬಿಗಳ ಮೂಲಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಪರೇಶ್ ರಾವಲ್ ಆರೋಪಿಸಿದರು.
 
ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿರುವುದು ಬೋಗಸ್ ಕೃತ್ಯ. ಇದಕ್ಕಿಂತ ಮೊದಲು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆದಾಗ ಸಾಹಿತಿಗಳು ಎಲ್ಲಿದ್ದರು? ಆ ಸಂದರ್ಭದಲ್ಲಿ ವಾಕ್‌ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರಲಿಲ್ಲವೇ? ಎಂದು ಪ್ರಶ್ನಿಸಿದರು.
 
ನಾನು ನಟಿಸಿದ ಓ ಮೈ ಗಾಡ್ ಚಿತ್ರ ಕೂಡಾ ದೇಶದ ಹಲವಾರು ನಗರಗಳಲ್ಲಿ ಹಲವಾರು ಕಾರಣಗಳಿಂದಾಗಿ ಪ್ರದರ್ಶನಗೊಳ್ಳಲಿಲ್ಲ. ಆದಾಗ್ಯೂ ನಾನು ಅಸಹಿಷ್ಣುತೆ ಕುರಿತಂತೆ ಹೇಳಲಿಲ್ಲ ಎಂದು ಬಾಲಿವುಡ್ ನಟ ಬಿಜೆಪಿ ಸಂಸದ ಪರೇಶ್ ರಾವಲ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ