ಆರೋಪಿ ಜತೆ ರಾಜಿ ಸಂಧಾನ ಮಾಡಿಕೊಂಡು ಆತನನ್ನು ಮದುವೆಯಾಗು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಸೂಚನೆಯನ್ನು ತಿರಸ್ಕರಿಸಿ ಕಾನೂನು ಹೋರಾಟವನ್ನು ಮುಂದುವರೆಸಿದ್ದ ಅತ್ಯಾಚಾರ ಪೀಡಿತಳ ಪ್ರಕರಣ ಕಳೆದ ಕೆಲ ತಿಂಗಳ ಹಿಂದೆ ಇಡೀ ದೇಶದ ಗಮನ ಸೆಳೆದಿತ್ತು. ಹೈಕೋರ್ಟ್ ಆಕೆಗೆ ನೀಡಿದ್ದ ನಿರ್ದೇಶನವೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಆದರೆ ಅಂದು ಆರೋಪಿಯನ್ನು ಮದುವೆಯಾಗಲು ನಿರಾಕರಿಸಿದ್ದ ಪೀಡಿತೆ ಈಗ ಆತನನ್ನು ಮದುವೆಯಾಗಿದ್ದಾಳೆ.
ಕಳೆದ ವರ್ಷ ಜೂನ್ 23 ರಂದು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾದ ಪಿ. ದೇವದಾಸ್ ಅವರು ಸಂತ್ರಸ್ತೆಗೆ ಆರೋಪಿಯ ಜತೆ ಸಂಧಾನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ತಾನು ಆಕೆಯನ್ನು ಮದುವೆಯಾಗುತ್ತೇನೆ. ನನ್ನನ್ನು ಬಿಡುಗಡೆ ಮಾಡಿ ಎಂದು ಆರೋಪಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಸರು ಪೀಡಿತೆಗೆ ಈ ಸೂಚನೆ ನೀಡಿದ್ದರು. ಆದರೆ ಪೀಡಿತೆ ಸಂಧಾನ ಮಾಡಿಕೊಳ್ಳಲು ನಿರಾಕರಿಸಿದ್ದಳು.