ವೇಶ್ಯೆ ಪತ್ನಿಯನ್ನು ಹತ್ಯೆ ಮಾಡಿದ ಚೆನ್ನೈ ಮೂಲದ ಬ್ಯಾಂಕ್ ಉದ್ಯೋಗಿ

ಶುಕ್ರವಾರ, 3 ಏಪ್ರಿಲ್ 2015 (15:19 IST)
ನಗರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬ ಬಾಂಗ್ಲಾದೇಶ ಮೂಲದ ವೇಶ್ಯೆಯೊಂದಿಗಿನ ಸಂಬಂಧದಿಂದಾಗಿ ಕುಟುಂಬವನ್ನು ತೊರೆದಿದ್ದಲ್ಲದೇ ತದನಂತರ, ವೇಶ್ಯಾವಾಟಿಕೆಯನ್ನು ಬಿಡಲೊಪ್ಪದ ವೇಶ್ಯೆಯನ್ನು ಕೂಡಾ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

ಚೆನ್ನೈ ಮೂಲದ 39 ವರ್ಷ ವಯಸ್ಸಿನ ಬ್ಯಾಂಕ್ ಉದ್ಯೋಗಿ ಕುಮಾರನ್ ಸೋಬಿಯಾ ಕೊನಾರ್, ಮಧ್ಯರಾತ್ರಿಯ ಹೊತ್ತಿನಲ್ಲಿ ನಾಗಪಾಡಾ ಪೊಲೀಸ್ ಠಾಣೆಗೆ ತೆರಳಿ ನಾನು ನನ್ನು ಪತ್ನಿಯನ್ನು ಹತ್ಯೆ ಮಾಡಿದ್ದೇನೆ, ದಯವಿಟ್ಟು ಬಂಧಿಸಿ ಎಂದು ಪೊಲೀಸರಿಗೆ ವಿವರಿಸಿದಾಗ ಆಘಾತಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

ಬಾಂಗ್ಲಾದೇಶ ಮೂಲದ ಮಹಿಳೆ ನಗರದ ಪ್ರಖ್ಯಾತ ರೆಡ್‌ಲೈಟ್ ಏರಿಯಾ ಕಾಮಟಿಪುರದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು. ಆರೋಪಿ ಕುಮಾರನ್, ಮೂರು ವರ್ಷಗಳ ಹಿಂದೆ ಆಕೆಯನ್ನು ಭೇಟಿಯಾಗಿದ್ದ. ನಂತರ ಆಕೆಯೊಂದಿಗೆ ಲವ್ವಿಡವ್ವಿಯಲ್ಲಿ ಬಿದ್ದು ನಿರಂತರವಾಗಿ ಮುಂಬೈಗೆ ಭೇಟಿ ನೀಡಲು ಆರಂಭಿಸಿದ್ದ.

ಕುಮಾರನ್‌ಗೆ ಈಗಾಗಲೇ ವಿವಾಹವಾಗಿತ್ತು. ಚೆನ್ನೈಯಲ್ಲಿದ್ದ ಪತ್ನಿಗೆ ಪತಿಯ ರಾಸಲೀಲೆ ಗೊತ್ತಾಗಿತ್ತು. ಪತಿಯ ರಾಸಲೀಲೆ ಬಹಿರಂಗವಾದ ಕೂಡಲೇ ಆತನ ಪೋಷಕರು ಮನೆಯಿಂದ ಹೊರದಬ್ಬಿದ್ದಾರೆ. ಆದರೆ, ಕುಮಾರನ್‌ ವೇಶ್ಯೆಯ ಸ್ವರ್ಗ ಸುಖದಲ್ಲಿ ಮೈ ಮರೆತಿದ್ದ. ಪೋಷಕರ ಪತ್ನಿ ಮತ್ತು ಮಕ್ಕಳ ನೋವು ಕೂಡಾ ಅರ್ಥೈಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನಿರಂತರವಾಗಿ ವೇಶ್ಯೆಗೆ ಹಣ ರವಾನಿಸುತ್ತಿದ್ದ.

ಮನೆಯಿಂದ ಹೊರಬಂದನಂತರ ಕಳೆದ ಎರಡು ವರ್ಷಗಳ ಹಿಂದೆ ಕುಮಾರನ್ ಮತ್ತು ವೇಶ್ಯೆ ದೇವಾಲಯವೊಂದರಲ್ಲಿ ವಿವಾಹವಾದರು. ಕೆಲ ದಿನಗಳು ಕಳೆದ ನಂತರ ಆಕೆಗೆ ಇನ್ನಿಬ್ಬರು ಪುರುಷರೊಂದಿಗೆ ಅನೈತಿಕ ಸಂಬಂಧವಿದೆ ಎನ್ನುವ ಮಾಹಿತಿ ಗೊತ್ತಾಗಿದೆ. ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ತೊರೆದು ಗೃಹಿಣಿಯಂತೆ ಜೀವನ ನಡೆಸು ಎಂದು ಕುಮಾರನ್ ಸಲಹೆಗಳಿಗೆ ಆಕೆ ಕ್ಯಾರೆ ಎನ್ನುತ್ತಿರಲಿಲ್ಲ.

ಕಳೆದ ಮಂಗಳವಾರದಂದು ತನ್ನ ಪತ್ನಿ ಗ್ರಾಹಕರೊಂದಿಗೆ ಮಾತನಾಡುತ್ತಿರುವ ದೃಶ್ಯ ಕಣ್ಣಿಗೆ ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಕುಮಾರನ್ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.ದಂಪತಿಗಳಲ್ಲಿ ಜಗಳ ಮುಂದುವರಿದು ಕೊನೆಗೆ ನಿನ್ನೊಂದಿಗೆ ಇನ್ನು ಮುಂದೆ ಯಾವ ಸಂಬಂಧವು ಬೇಡ ಎಂದು ಪತ್ನಿ ಹೇಳಿದಾಗ, ಕಂಗಾಲಾದ ಕುಮಾರನ್ ಚಾಕುವಿನಿಂದ ಆಕೆಯನ್ನು ಮನಬಂದಂತೆ ತಿವಿದು ಸಾಯಿಸಿದ್ದಾನೆ.

ಆರೋಪಿ ಕುಮಾರನ್‌ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಲಾಗಿದ್ದು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ