ಮುಸ್ಲಿಂ ಜನಸಂಖ್ಯೆ ಹೆಚ್ಚಳ ದೇಶಕ್ಕೆ ಎಚ್ಚರಿಕೆಯ ಗಂಟೆ: ಬಿಜೆಪಿ ಸಂಸದ ಆದಿತ್ಯನಾಥ್

ಗುರುವಾರ, 27 ಆಗಸ್ಟ್ 2015 (20:22 IST)
ಕಳೆದ 2001ರಿಂದ 2011ರ ವರೆಗೆ ಹಿಂದು ಜನಸಂಖ್ಯೆಯಲ್ಲಿ ಶೇ.16.8 ರಷ್ಟು ಹೆಚ್ಚಳವಾಗಿದ್ದರೆ ಮುಸ್ಲಿಂ ಸಮುದಾಯದ ಜನಸಂಖ್ಯೆಯಲ್ಲಿ ಶೇ.24.6 ರಷ್ಟು ಹೆಚ್ಚಳವಾಗಿರುವುದು ಆಘಾತ ತಂದಿದ್ದು ದೇಶದ ಪ್ರತಿಯೊಬ್ಬರಿಗೆ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಗೊಳಿಸಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
 
ಕಳೆದ ಒಂದು ದಶಕದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದಲ್ಲದೇ ಅಪಾಯವು ಕಾದಿದೆ ಎಂದು ಮತ್ತೊಬ್ಬ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
 
ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ನಿನ್ನೆ ಜಾತಿ ಜನಗಣತಿ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದರ ಹೇಳಿಕೆ ಹೊರಬಿದ್ದಿದೆ.
 
ಹಮ್ ದೋ ಹಮಾರೆ ದೋ ಎನ್ನುವ ಘೋಷಣೆಯನ್ನು ಪ್ರತಿಯೊಬ್ಬ ಸಮುದಾಯದವರು ಪಾಲಿಸುವಂತಾಗಲು ಕೇಂದ್ರ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮುಸ್ಲಿಂ ಜನಸಂಖ್ಯೆಯಲ್ಲಿ ಅಧಿಕ ಹೆಚ್ಚಳವಾಗುತ್ತಿರುವುದನ್ನು ನೋಡಿದಲ್ಲಿ ಜನಸಂಖ್ಯೆ ಅಸಮತೋಲನದಿಂದ ದೇಶಕ್ಕೆ ಮುಂಬರುವ ದಿನಗಳಲ್ಲಿ ಅಪಾಯ ಕಾದಿದೆ ಎಂದು ಎಚ್ಚರಿಸಿದರು. 
 
ಒಂದು ವೇಳೆ ಮುಸ್ಲಿಂ ಜನಸಂಖ್ಯೆ ಇದೇ ರೀತಿ ಹೆಚ್ಚಳವಾದಲ್ಲಿ 50 ವರ್ಷಗಳ ನಂತರ ದೇಶವನ್ನು ವಿಭಜಿಸುವಂತಹ ಆಘಾತಕಾರಿ ಘಟನೆಗಳು ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಜನಸಂಖ್ಯಾ ಸ್ಫೋಟದಿಂದ ಹಿಂದು ಮತ್ತು ಸಿಖ್ಖರು ಕಾಶ್ಮಿರದಿಂದ ಪಲಾಯನಗೊಂಡಂತಾಗುತ್ತದೆ. ಎರಡು ಘಟನೆಗಳಿಗೆ ಜನಸಂಖ್ಯೆ ಹೆಚ್ಚಳವೇ ಕಾರಣವಾಗಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ