ಸದಾ ಕೋಮುಗಲಭೆಗಳಿಂದ ಗುರುತಿಸಲ್ಪಡುವ ಮುಝಪ್ಪರ್ನಗರದಲ್ಲಿ ಪ್ರೀತಿಪ್ರೇಮದಲ್ಲಿ ಬೀಳುವುದೆಂದರೆ ಯುವಕ-ಯುವತಿಯರ ಪಾಲಿಗೆ ಆತಂಕದ ವಿಚಾರ. ಅದರಲ್ಲೂ ಪ್ರೇಮಪಾಶಕ್ಕೆ ಸಿಲುಕಿದವರು ಹಿಂದೂ ಮತ್ತು ಮುಸ್ಲಿಂ ಧರ್ಮದವರಾಗಿದ್ದರಂತೂ ತಮ್ಮ ಪ್ರೀತಿಯನ್ನು ಮುಂದುವರೆಸಲು ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಪ್ರೀತಿ ಎನ್ನುವುದು ಹೇಳಿ ಕೇಳಿ ಬರುವುದಿಲ್ಲ. ಈ ಇಬ್ಬರು ಯುವಪ್ರೇಮಿಗಳಿಗಾಗಿದ್ದು ಅದೇ. ಪರಸ್ಪರ ಗಾಢವಾಗಿ ಪ್ರೀತಿಸತೊಡಗಿದ 18 ವರ್ಷದ ಇಮ್ರಾನ್ ಬಾನೋ ಮತ್ತು 21 ವರ್ಷದ ರಜನೀಶ್ ಕುಮಾರ್ ಕದ್ದು ಮುಚ್ಚಿ ಭೇಟಿಯಾಗಲು ಪ್ರಾರಂಭಿಸಿದ್ದರು.
ತಮ್ಮ ಸಂಬಂಧಿಕರು ಮತ್ತು ಸಮಾಜ ಮುಂದೊಂದು ದಿನ ತಮ್ಮನ್ನು ಒಪ್ಪಿಕೊಳ್ಳುತ್ತದೆ ಎಂಬುದು ಅವರ ದೂರದಾಸೆಯಾಗಿತ್ತು. ಆದರೆ 2013ರಲ್ಲಾದ ಕೋಮುಗಲಭೆ 59 ಜನರ ಸಾವಿಗೆ ಮತ್ತು 50,000 ಜನರನ್ನು ನಿರಾಶ್ರಿತರನ್ನಾಗಿಸುವಂತೆ ಮಾಡಿದ್ದು ಅವರನ್ನು ಪದೇ ಪದೇ ಕಾಡಿದೆ.