60 ದಶಕಗಳ ನಂತರ ಗಾಂಧಿ ಹಂತಕ ಗೋಡ್ಸೆ ಮತ್ತೆ ಮತ್ತೆ ಸುದ್ದಿಗೆ ಬರುತ್ತಿದ್ದಾನೆ. ಕಳೆದ ತಿಂಗಳು ಬಿಜೆಪಿ ನಾಯಕರೊಬ್ಬರು ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದಿದ್ದು ತೀವೃ ವಿವಾದವನ್ನು ಸೃಷ್ಟಿಸಿತ್ತು. ಮೀರತ್ನಲ್ಲಿ ಗೋಡ್ಸೆ ದೇವಸ್ಥಾನ ಕಟ್ಟಿರುವ ಸುದ್ದಿಯೂ ಸಹ ಇತ್ತೀಚಿನವರೆಗೂ ಪ್ರಮುಖ ಸುದ್ದಿಯಾಗಿ ಹರಿದಾಡುತ್ತಿತ್ತು. ಈಗ ಗೋಡ್ಸೆ ಮತ್ತೆ ಸುದ್ದಿಯಲ್ಲಿದ್ದಾನೆ. ಮರುಜನ್ಮದಲ್ಲಿ ನಂಬಿಕೆಯನ್ನಿಟ್ಟಿದ್ದ ಆತ ಮತ್ತೆ ಗಾಂಧಿಯನ್ನು ಕೊಲ್ಲಬಯಸಿದ್ದ ಎಂದು ಮಾಜಿ ಸಿಐಡಿ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ
.
ಜನವರಿ 30, 1948ರಲ್ಲಿ ಗಾಂಧಿ ಹತ್ಯೆ ನಂತರ ಗೋಡ್ಸೆಯನ್ನು ವಿಚಾರಣೆಗೊಳಪಡಿಸಲು ರಚಿಸಲಾಗಿದ್ದ ಸಿಐಡಿ ತಂಡದಲ್ಲಿದ್ದ ಬಾಬು ಹರಿಹರ್ ಸಿಂಗ್( 96) ಗಾಂಧಿ ಮತ್ತು ಗೋಡ್ಸೆ ಇಬ್ಬರನ್ನು ನೋಡಿರುವವರಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಹಿಂದಿನ ಬಿಹಾರದಲ್ಲಿ ಎಎಸ್ಪಿಯಾಗಿದ್ದ ಅವರು 1977 ರಲ್ಲಿ ನಿವೃತ್ತರಾಗಿದ್ದರು.
ಮುದಿ ವಯಸ್ಸು ಸಹ ಸಿಂಗ್ ಅವರ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸಿಲ್ಲ. ಮುಂಬೈನ ಅರ್ಥೂರ್ ರಸ್ತೆ ಜೈಲಿನಲ್ಲಿ ಗೋಡ್ಸೆ ಸಿಐಡಿ ತಂಡದ ಬಳಿ ಹೇಳಿದ್ದನ್ನೆಲ್ಲವನ್ನು ಅವರು ಈಗಲೂ ಸ್ಪಷ್ಟವಾಗಿ ನೆನಪಿಟ್ಟುಕೊಂಡಿದ್ದಾರೆ. "ನಾನು ಒಬ್ಬ ಹಿಂದೂ ಮತ್ತು ಮರುಜನ್ಮದಲ್ಲಿ ನಂಬಿಕೆ ಇಡುತ್ತೇನೆ. ನನ್ನನ್ನು ನೇಣುಗೇರಿಸಲಾಗುವುದರಿಂದ ನಾನು ಅಕಾಲಿಕ ಮರಣವನ್ನಪ್ಪಿದಂತಾಗುತ್ತದೆ. ಮತ್ತೆ ಮರುಹಜ್ಮ ಪಡೆಯುವವರೆಗೂ ನಾನು ಆತ್ಮರೂಪದಲ್ಲಿರುತ್ತೇನೆ. ನಾನು ಮತ್ತೆ ಹುಟ್ಟಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆ ಮೂಲಕ ನಾನು ಗಾಂಧಿಯನ್ನು ಕೊಲ್ಲಬಯಸುತ್ತೇನೆ", ಎಂದು ಗೋಡ್ಸೆ ವಿಚಾರಣೆ ವೇಳೆ ಹೇಳಿಕೊಂಡಿದ್ದ ಎಂದು ಸಿಂಗ್ ತಿಳಿಸಿದ್ದಾರೆ.