ನೇಪಾಳ ಭೂಕಂಪ: ಸೇವೆಯಲ್ಲಿ ನಿರತರಾದ ವೈದ್ಯರು ಮತ್ತು ಸೈನಿಕರಿಗೆ ಮೋದಿ ಧನ್ಯವಾದ

ಸೋಮವಾರ, 27 ಏಪ್ರಿಲ್ 2015 (15:32 IST)
ನೇಪಾಳದಲ್ಲಿ ನಡೆದ ವಿನಾಶಕಾರಿ ಭೂಕಂಪದ ಪರಿಣಾಮ ಸಂಕಷ್ಟದಲ್ಲಿ ಸಿಲುಕಿರುವರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಭಾರತೀಯ ವೈದ್ಯರಿಗೆ ಮತ್ತು ಸೈನಿಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 

ಅವಘಢಕ್ಕೆ ತತ್‌ಕ್ಷಣ ಸ್ಪಂದಿಸಿದ ಪ್ರಧಾನಿಯವರನ್ನು ಶ್ಲಾಘಿಸಿ 'ಪ್ರಧಾನಿಯವರೇ ಧನ್ಯವಾದಗಳು' ಎಂದು ಟ್ವೀಟ್ ಮಾಡಿರುವವರಿಗೆ ಉತ್ತರಿಸಿ ಸರಣಿ ಟ್ವಿಟ್ ಪ್ರಕಟಿಸಿರುವ ಅವರು "'ಸೇವೆಯೇ ಪರಮ ಧರ್ಮ' ಎಂಬುದನ್ನು ಬೋಧಿಸುವ ನಮ್ಮ ಸಂಸ್ಕೃತಿಗೆ ಧನ್ಯವಾದಗಳನ್ನು ಅರ್ಪಿಸಬೇಕು,ನನಗಲ್ಲ" ಎಂದಿದ್ದಾರೆ. 
 
"ನೇಪಾಳವನ್ನು ಸಹಜ ಸ್ಥಿತಿಗೆ ತರಲು ಶ್ರಮಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಕ್ಕೆ, ವೈದ್ಯರಿಗೆ ಮತ್ತು ಸ್ವಯಂ ಸೇವಕರಿಗೆ ನಾವು ಧನ್ಯವಾದಗಳನ್ನು ಸಲ್ಲಿಸಬೇಕು. ಭೂಕಂಪದ ಭೀಕರತೆಯನ್ನು ನಮ್ಮ ಕಣ್ಣ ಮುಂದೆ ತಂದಿಡುತ್ತಿರುವ ಮಾಧ್ಯಮದವರಿಗೆ, ಪರಿಹಾರ ಕಾರ್ಯಕ್ಕಾಗಿ ಹಣ, ಸಂಪನ್ಮೂಲ, ಔಷಧಿಗಳನ್ನು ಸಂಗ್ರಹಿಸುತ್ತಿರುವ ಉತ್ಸಾಹಿ  ಯುವಸಮುದಾಯಕ್ಕೆ ನಾವು ಆಭಾರ ವ್ಯಕ್ತ ಪಡಿಸಬೇಕು", ಎಂದು ಮೋದಿಯವರ ಟ್ವೀಟ್ ಹೇಳುತ್ತದೆ. 
 
ನೇಪಾಳದ ನೋವನ್ನು ನಮ್ಮ ಕಷ್ಟವೇ ಎಂದು ಭಾವಿಸಿ ಸಹಾಯಹಸ್ತ ಚಾಚಲು ಮುಂದೆ ಬನ್ನಿ ಎಂದು ಅವರು ಭಾರತೀಯರಲ್ಲಿ ಮನವಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ