ದೆಹಲಿಯ ಕಮಲಾನಗರದಲ್ಲಿ ಹಾಡ ಹಗಲೇ 1.5 ಕೋಟಿ ದರೋಡೆ

ಶನಿವಾರ, 29 ನವೆಂಬರ್ 2014 (13:29 IST)
ಖಾಸಗಿ ಬ್ಯಾಂಕ್‌ಗೆ ಹಣ ಹಾಕಲು ಬಂದಿದ್ದ ವಾಹನದ ಮೇಲೆ ದಾಳಿ ನಡೆಸಿ 1.5 ಕೋಟಿ ರೂಪಾಯಿಗಳನ್ನು ದರೋಡೆ ಮಾಡಿ ಆರೋಪಿಗಳು ಪರಾರಿಯಾದ ಘಟನೆ ದೆಹಲಿಯ ಕಮಲಾನಗರದಲ್ಲಿ ನಡೆದಿದೆ. 
 
ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ಸೆಕ್ಯೂರಿಟಿ ಗಾರ್ಡ್‌ನನ್ನು ಹತ್ಯೆ ಮಾಡಿ, 1.5 ಕೋಟಿ ರೂಪಾಯಿಗಳ ಹಣದೊಂದಿಗೆ ಪರಾರಿಯಾಗಿದ್ದಾರೆ. 
 
ಇಬ್ಬರು ಆರೋಪಿಗಳು ಹಾಡ ಹಗಲೇ ಸೆಕ್ಯೂರಿಟಿ ಗಾರ್ಡ್ ಮೇಲೆ ಗುಂಡಿನ ದಾಳಿ ನಡೆಸಿರುವುದು ದೆಹಲಿ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. 

ಘಟನೆಯ ಪ್ರತ್ಯಕ್ಷಸಾಕ್ಷಿಗಳು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಸುದ್ದಿ ತಿಳಿಸಿದ್ದಾರೆ. ತಕ್ಷಣವೇ ಪೊಲೀಸ್ ಆಗಮಿಸಿದ್ದು,  ಗಂಭೀರ ಗಾಯಗೊಂಡ ಸೆಕ್ಯೂರಿಟಿ ಗಾರ್ಡ್‌ನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆ ಹೊತ್ತಿಗೆ ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ್ದ ಎಂದು ಪೊಲೀಸರು ಹೇಳಿದ್ದಾರೆ.
 
ದರೋಡೆ ಮಾಡಿದ ಇಬ್ಬರು ಆಗಂತುಕರ ವಿರುದ್ಧ ರೂಪ್ ನಗರ್ ಪೊಲೀಸ್ ಠಾಣೆಯಲ್ಲಿ ಹತ್ಯೆ, ದರೋಡೆ ಮತ್ತು ಮಾರಕಾಯುಧಗಳನ್ನು ಹೊಂದಿರುವ ಬಗ್ಗೆ ಕೇಸು ದಾಖಲಿಸಲಾಗಿದೆ.
 
ಇದೀಗ ಘಟನಾ ಸ್ಥಳದ ಪಕ್ಕದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಬಳಸಿ ದರೋಡೆಕೋರರನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿ ಪೊಲೀಸರು ಮಗ್ನರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ