ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಜೆಡಿಯು-ಆರ್ಜೆಡಿ- ಕಾಂಗ್ರೆಸ್ ನೇತೃತ್ವದ ಸರಕಾರ ನವೆಂಬರ್ 20 ರಂದು ನಿತೀಶ್ ಕುಮಾರ್ ನೇತೃತ್ವದಲ್ಲಿ ಸರಕಾರ ರಚನೆಯಾಗಲಿದ್ದು, ಒಟ್ಟು 35 ಶಾಸಕರು ಸಚಿವ ಸ್ಥಾನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ನವೆಂಬರ್ 20 ರಂದು ನಡೆಯಲಿದೆ. ಆರ್ಜೆಡಿಯಿಂದ 16 ಶಾಸಕರು, ಜೆಡಿಯು ಪಕ್ಷದ 14 ಶಾಸಕರು ಮತ್ತು 5 ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಲಾಲು ಯಾದವ್ ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಆರ್ಜೆಡಿ ಪಕ್ಷದ ಅಬ್ದುಲ್ ಬಾರಿ ಸಿದ್ದಿಕಿ, ಲಲಿತ್ ಯಾದವ್, ಅಲೋಕ್ ಮೆಹತಾ ಮತ್ತು ವಿಜಯ್ ಕುಮಾರ್ ಕೂಡಾ ಸಚಿವ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಪಕ್ಷದಿಂದ ಅಶೋಕ್ ಚೌಧರಿ, ಸದಾನಂದ್ ಸಿಂಗ್, ಅವಧೇಶ್ ಸಿಂಗ್, ಅಶೋಕ್ ಕುಮಾರ್ ಮತ್ತು ಅಮಿತಾ ಭೂಷಣ ಸಚಿವರಾಗುವ ಸಾಧ್ಯತೆಗಳಿವೆ.
ಜನತಾ ಪರಿವಾರ, ವಿಧಾನಸಭೆ ಚುನಾವಣೆಯಲ್ಲಿ 178 ಸೀಟುಗಳಲ್ಲಿ ಜಯಗಳಿಸಿತ್ತು, ಜೆಡಿಯು 71, ಆರ್ಜೆಡಿ 80 ಮತ್ತು ಕಾಂಗ್ರೆಸ್ 27 ಸ್ಥಾನಗಳಲ್ಲಿ ಜಯಗಳಿಸಿದೆ.