ಅಮರ್ ಸಿಂಗ್ ಸಮಾಜವಾದಿ ಪಕ್ಷಕ್ಕೆ ಮರಳುವ ಸಾಧ್ಯತೆಗಳಿಲ್ಲ:ಸಚಿವ ಆಜಂಖಾನ್

ಮಂಗಳವಾರ, 2 ಫೆಬ್ರವರಿ 2016 (16:56 IST)
ಕಳೆದ 2010ರಲ್ಲಿ ಸಮಾಜವಾದಿ ಪಕ್ಷದಿಂದ ಉಚ್ಚಾಟನೆಗೊಂಡ ಮಾಜಿ ಮುಖಂಡ ಅಮರ್ ಸಿಂಗ್ ಮತ್ತೆ ಪಕ್ಷಕ್ಕೆ ಮರಳುವ ಸಾಧ್ಯತೆಗಳಿಲ್ಲ ಎಂದು ನಗರಾಭಿವೃದ್ಧಿ ಸಚಿವ ಮೊಹಮ್ಮದ್ ಆಜಂ ಖಾನ್ ಹೇಳಿದ್ದಾರೆ.
 
ಮಾಜಿ ಮುಖಂಡ ಅಮರ್ ಸಿಂಗ್ ಹಾರಿಸಿದ ಗುಂಡಿನಂತೆ. ಹಾರಿಸಿದ ಗುಂಡು ಯಾವುದೇ ಕೆಲಸಕ್ಕೆ ಬಳಕೆಯಾಗುವುದಿಲ್ಲ. ಅದರಂತೆ, ಅವರು ಸಮಾಜವಾದಿ ಪಕ್ಷಕ್ಕೆ ಮರಳುವುದಿಲ್ಲ ಎಂದು ಸಚಿವ ಖಾನ್ ತಿಳಿಸಿದ್ದಾರೆ.
 
ಸಮಾಜವಾದಿ ಪಕ್ಷಕ್ಕಾಗಿ ನಾನು ಮತಗಳನ್ನು ತರುವ ಶಕ್ತಿಯಿದೆ. ಆದರೆ, ಬಿಎಂಡಬ್ಲ್ಯೂ ಐಷಾರಾಮಿ ಕಾರಿನಲ್ಲಿ ತಿರುಗುವ ಅಮರ್‌ಸಿಂಗ್‌ಗೆ ತಮ್ಮ ಪತ್ನಿಯರು ಯಾರಿಗೆ ಮತ ಹಾಕುತ್ತಾರೆ ಎನ್ನುವುದು ಕೂಡಾ ಖಚಿತವಿರುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
ಮಾಜಿ ಮುಖಂಡ ಅಮರ್ ಸಿಂಗ್ ಮತ್ತೆ ಸಮಾಜವಾದಿ ಪಕ್ಷಕ್ಕೆ ಮರಳಲಿದ್ದಾರೆ ಎನ್ನುವ ಸಮಾಜವಾದಿ ಪಕ್ಷದ ನಾಯಕರ ಹೇಳಿಕೆಯ ನಂತರ ಸಚಿವ ಖಾನ್ ಹೇಳಿಕೆ ಹೊರಬಿದ್ದಿದೆ.
 
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹೇಳಿಕೆ ನೀಡಿದ್ದರೆ, ಅವರ ಸಹೋದರ ಲೋಕೋಪಯೋಗಿ ಸಚಿವ ಶಿವಪಾಲ್ ಸಿಂಗ್ ಯಾದವ್, ಅಮರ್ ಸಿಂಗ್ ಸದಾ ನಮ್ಮ ಕುಟುಂಬದ ಸದಸ್ಯರಾಗಿರುತ್ತಾರೆ ಎಂದು ಹೊಗಳಿದ್ದರು.
 
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾವತ್ತೂ ಬಯಸುತ್ತಾರೆಯೋ ಆವತ್ತು ಅಮರ್ ಸಿಂಗ್ ಪಕ್ಷಕ್ಕೆ ಮರಳುತ್ತಾರೆ ಎಂದು ಶಿವಪಾಲ್ ಯಾದವ್ ತಿಳಿಸಿದ್ದಾರೆ.
 
ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಚುನಾವಣೆಗೆ ಮುನ್ನವೇ ಭಿನ್ನಾಭಿಪ್ರಾಯಗಳನ್ನು ಮರೆತು ಮುಲಾಯಂ ಮತ್ತು ಅಮರ್ ಸಿಂಗ್ ಒಂದಾಗುವ ಸಾಧ್ಯತೆಗಳಿವೆ ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ