ದಾವುದ್ ಅಡಗಿರುವ ಸ್ಥಳದ ಮಾಹಿತಿಯಿಲ್ಲ ಎಂದ ಗೃಹ ಸಚಿವ ರಾಜನಾಥ್ ಸಿಂಗ್
ಮಂಗಳವಾರ, 5 ಮೇ 2015 (16:05 IST)
ಭೂಗತ ದೊರೆ ದಾವುದ್ ಇಬ್ರಾಹಿಂ ಅವಿತುಕೊಂಡಿರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿಕೆ ನೀಡಿ ಮುಜುಗರ ಅನುಭವಿಸಿದ್ದಾರೆ.
ಕಳೆದ 1993 ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾದ ದಾವುದ್, ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿತ್ತು. ಆದರೆ, ಸರಕಾರದ ಬಳಿ ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ನಾಚಿಕೆಗೇಡಿತನದ ಸಂಗತಿ ಎಂದು ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಳೆದ ಡಿಸೆಂಬರ್ 2014ರಲ್ಲಿ ಹೇಳಿಕೆಯೊಂದನ್ನು ನೀಡಿ.ದಾವುದ್ ಪಾಕಿಸ್ತಾನದ ಕರಾಚಿ ನಗರದಲ್ಲಿ ವಾಸವಾಗಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಕೇಂದ್ರ ಸರಕಾರ ಉಲ್ಟಾ ಹೊಡೆದಿದೆ.
ಮುಂಬೈ ಬ್ಲಾಸ್ಟ್ ಪ್ರಕರಣದ ಆರೋಪಿ ದಾವುದ್ ಬಗ್ಗೆ ಹಲವಾರು ದಾಖಲೆಗಳನ್ನು ಭಾರತ, ನೆರೆ ರಾಷ್ಟ್ರವಾದ ಪಾಕಿಸ್ತಾನಕ್ಕೆ ನೀಡಿ ದಾವುದ್ನನ್ನು ಒಪ್ಪಿಸುವಂತೆ ಕೋರಿತ್ತು.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ದಾವುದ್ ಇಬ್ರಾಹಿಂ ಅಫ್ಘನ್-ಪಾಕ್ ಗಡಿಯಲ್ಲಿ ವಾಸಿಸುತ್ತಿದ್ದಾನೆ. ಆರೋಪಿಗೆ ಪಾಕ್ ಆಶ್ರಯ ನೀಡಿದೆ ಎಂದು ಹೇಳಿಕೆ ನೀಡಿ ಪಾಕ್ ಸರಕಾರವನ್ನು ಟೀಕಿಸಿದ್ದರು. ಇದೀಗ ಉಲ್ಟಾ ಹೊಡೆದಿದ್ದಾರೆ.