ಭುವನೇಶ್ವರದಿಂದ 700 ಕೀಮೀ ದೂರದಲ್ಲಿರುವ ನಬರಂಗಪುರ ಜಿಲ್ಲೆಯ ಕುಟುಗುಡಾ ಎಂಬ ಗ್ರಾಮದ ಕನಕ್ ದೇ ಭಾತ್ರ ಎಂಬ 15 ವರ್ಷ ಪ್ರಾಯದ ಹುಡುಗಿಯೇ ಈ ದುರಂತಕ್ಕೆ ಕೈ ಹಾಕಿದ್ದು, ಆಕೆ 10 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆ 200 ರೂಪಾಯಿ ಶಾಲಾ ಶುಲ್ಕವನ್ನು ಕಟ್ಟಬೇಕಾಗಿತ್ತು. ಹಾಗಾಗಿ ತನ್ನ ತಂದೆ ತಾಯಿಯ ಬಳಿ 200 ರೂಪಾಯಿ ನೀಡುವಂತೆ ಕೇಳಿದ್ದಾಳೆ. ದಿನಗೂಲಿ ಕಾರ್ಮಿಕರಾಗಿರುವ ಅವರ ಬಳಿ ಆ ಸಮಯದಲ್ಲಿ 200 ರೂಪಾಯಿ ಇರಲಿಲ್ಲ ಎಂದು ಆಕೆಯ ಸಹೋದರಿ ಲಲಿತಾ ಹೇಳಿದ್ದಾರೆ.
ತನಗೆ ಪಾಲಕರು ಹಣ ನೀಡಲು ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡ ಬಾಲಕಿ ಮನೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ನಂತರ ಅಲ್ಲೇ ಇದ್ದ ಸೀಮೆಎಣ್ಣೆ ಡಬ್ಬಿಯನ್ನು ಎತ್ತಿಕೊಂಡು ಮೈತುಂಬ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಆಕೆಯ ಪರಿವಾರದವರು ಮತ್ತು ನೆರೆಹೊರೆಯವರು ಆಕೆಯನ್ನು ತಕ್ಷಣ ರಕ್ಷಿಸಿದರು. ಆದರೆ ಅದಾಗಲೇ ಆಕೆಯ ದೇಹ 85 ಪ್ರತಿಶತದಷ್ಟು ಸುಟ್ಟು ಹೋಗಿತ್ತು ಎಂದು ತಿಳಿದು ಬಂದಿದೆ.