ಮರುಮತಾಂತರದಲ್ಲಿ ಏನೂ ತಪ್ಪಿಲ್ಲ: ಶಿವಸೇನಾ

ಸೋಮವಾರ, 22 ಡಿಸೆಂಬರ್ 2014 (15:00 IST)
ಮರುಮತಾಂತರ ಮಾಡುವುದರಲ್ಲಿ ಯಾವ ತಪ್ಪು ಇಲ್ಲ ಎಂದಿರುವ ಶಿವಸೇನೆ "ಹಿಂದೂಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿದ್ದವರ ಬಗ್ಗೆ ಕಿಡಿಕಾರಿದೆ. 
ನಿನ್ನೆಯವರೆಗೂ ಹಿಂದೂಗಳು ಮುಸ್ಲಿಂ ಧರ್ಮಕ್ಕೆ ಪರಿವರ್ತಿಸಲ್ಪಡುತ್ತಿದ್ದರು. ಅವರನ್ನು ಬಲವಂತವಾಗಿ ಅಥವಾ ಪ್ರಲೋಭನೆ ನೀಡಿ ಮತಾಂತರಿಸಲಾಯಿತು ಎಂದು ಯಾರೊಬ್ಬರು ಚಕಾರ ಎತ್ತಲಿಲ್ಲ. ಆದರೆ ಈಗ ಗಂಗಾ ನದಿ ಹಿಂತಿರುಗಿ ಹರಿಯಲು ಪ್ರಾರಂಭಿಸಿದಾಗ( ಹಿಂದೂ ಧರ್ಮಕ್ಕೆ ಮರುಮತಾಂತರ) ಹುಸಿ ಜಾತ್ಯತೀತವಾದಿಗಳು ಮತಾಂತರ ಸರಿಯಲ್ಲ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ. 
 
ಮೊಘಲ್ ಆಳ್ವಿಕೆಯಲ್ಲಿ ಹಿಂದೂಗಳನ್ನು ಬಲವಂತವಾಗಿ ಮುಸ್ಲಿಂರನ್ನಾಗಿಸಿದ್ದುದರ ಬಗ್ಗೆ ಮತ್ತು ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಡಳಿತಗಳ ಅಡಿಯಲ್ಲಿ ಕ್ರೈಸ್ತ ಧರ್ಮಕ್ಕೆ ಬದಲಾಯಿಸಿದ್ದುದರ ಬಗ್ಗೆ  ಜಾತ್ಯಾತೀತರೆಂದು ಹೇಳುವವರ ಅಭಿಪ್ರಾಯವೇನು ಎಂದು ಸೇನೆ ಪ್ರಶ್ನಿಸಿದೆ. 
 
ಬಿಜೆಪಿಯಲ್ಲಿ ಹೆಚ್ಚಿನವರು  ಈ ಮತಾಂತರದ ಪರವಾಗಿದ್ದಾರೆ ಎಂಬಂತೆ ತೋರುತ್ತಿದೆ. ಆದರೆ ನಿಜ ಹೇಳಬೇಕೆಂದರೆ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈ ಮತಾಂತರ ಗಲಾಟೆಯಲ್ಲಿ ಇಕ್ಕಟ್ಟಿಗೆ ಸಿಲುಕಿದೆ ಎಂದು ಸಾಮ್ನಾ ಹೇಳಿದೆ. 
 
ಅಯೋಧ್ಯಾದಲ್ಲಿ ಆದಷ್ಟು ಬೇಗ ರಾಮ ಮಂದಿರ ನಿರ್ಮಿಸಬೇಕು ಎಂಬ ಉತ್ತರ ಪ್ರದೇಶದ ರಾಜ್ಯಪಾಲ ರಾಮಾ ನಾಯ್ಕರ  ಹೇಳಿಕೆಯನ್ನು ಸೇನೆ ಬೆಂಬಲಿಸಿದೆ.
 
ವಿಶ್ವದಾದ್ಯಂತ ಶಕ್ತಿ ಮತ್ತು ಹಣವನ್ನು ಮುಂದಿಟ್ಟುಕೊಂಡು ಮತಾಂತರವನ್ನು ನಡೆಸಲಾಗುತ್ತದೆ. ಆದರೆ ಹಿಂದೂಗಳು ಈ ಹಾದಿಯನ್ನು ತುಳಿದಿಲ್ಲ. ಆದರೆ ನಮ್ಮ ಧರ್ಮದಿಂದ ಬೇರೆ ಧರ್ಮಕ್ಕೆ ಹೋದವರನ್ನು ಮರಳಿ ಕರೆ ತರುವಂತ ಮಹತ್ವದ ಕೆಲಸಕ್ಕೆ ಹಿಂದೂ ಸಂಘಟನೆಗಳು ಕೈ ಹಾಕಿವೆ ಎಂದು ಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ. 

ವೆಬ್ದುನಿಯಾವನ್ನು ಓದಿ