ಕುಡಿದು ಹಿಂಸಿಸುತ್ತಿದ್ದ ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಚರಂಡಿಗೆಸೆದ ಹೆತ್ತವರು

ಶನಿವಾರ, 31 ಜನವರಿ 2015 (16:56 IST)
ಮದ್ಯವ್ಯಸನಿ ಮಗನನ್ನು ಪಾಲಕರೇ ಭೀಕರವಾಗಿ ಕೊಂದು ಹಾಕಿ, ತುಂಡು ತುಂಡಾಗಿ ಕತ್ತರಿಸಿ ಚರಂಡಿಗೆಸೆದ ಕರಾಳ ಘಟನೆ ದೆಹಲಿಯಲ್ಲಿ ನಡೆದಿದೆ. 
 
ಪ್ರತಿದಿನ ಮದ್ಯ ಕುಡಿದು ಮನೆಗೆ ಬಂದು ಹಣಕ್ಕಾಗಿ ಪೀಡಿಸಿ ಹಲ್ಲೆ ನಡೆಸುತ್ತಿದ್ದ ಮಗನ ವರ್ತನೆಯಿಂದ ತಂದೆ ತಾಯಿ ಕಂಗೆಟ್ಟು ಹೋಗಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ದೆಹಲಿಯ ಜೈತಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ
 
ಮಗನ ಹಿಂಸೆಯಿಂದಾಗಿ ಸದಾ  ಭಯದಿಂದಲೇ ಬದುಕುತ್ತಿದ್ದ ವೃದ್ಧ ತಂದೆತಾಯಿಗಳು  ಆತನಿಂದ ಮುಕ್ತಿಯನ್ನು ಬಯಸಿದ್ದರು. ಹೀಗಾಗಿ ಆತನನ್ನು ಕೊಲ್ಲಲು ನಿಶ್ಚಯಿಸಿದ ಅವರು ತಮ್ಮ ಬುದ್ಧಿಮಾಂದ್ಯ ಬಾಲಕನ ಎದುರುಗಡೆಯೇ   ಹಿರಿಯ ಮಗನನ್ನು ಕೊಲೆ ಮಾಡಿದ್ದಾರೆ. ಸುತ್ತಿಗೆಯಿಂದ ಆತನ ಮೇಲೆ ದಾಳಿ ಮಾಡಿ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ತಮ್ಮ ಕೃತ್ಯವನ್ನು ಮುಚ್ಚಿ ಹಾಕಲು ಕಲ್ಲು ಕತ್ತರಿಸುವ ಯಂತ್ರದಿಂದ ಮಗನ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆರೋಪಿಗಳನ್ನು ನಂದ ಕಿಶೋರ್( 68) ಮತ್ತು ಆತನ ಪತ್ನಿ ಆಶಾ ದೇವಿ( 60)  ಎಂದು ಗುರುತಿಸಲಾಗಿದೆ. 
 
ನಿರುದ್ಯೋಗಿಯಾಗಿರುವ ಆರೋಪಿ ಕಿಶೋರ್ ಇತ್ತೀಚೆಗೆ ಪ್ಲಾಟ್ ಮಾರಾಟ ಮಾಡಿದ್ದರಿಂದ ಬಂದ ಹಣದಲ್ಲಿ ಜೀವನವನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ