ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಗದ್ದಲದೊಂದಿಗೆ ಪ್ರಾರಂಭವಾದ ಕಲಾಪ

ಬುಧವಾರ, 24 ಫೆಬ್ರವರಿ 2016 (12:27 IST)
ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಗದ್ದಲದೊಂದಿಗೆ ಇಂದು ಸಂಸತ್‌ನ ಬಜೆಟ್ ಅಧಿವೇಶನದ ಮೊದಲ ದಿನ ಪ್ರಾರಂಭವಾಯಿತು.

 
ರಾಜ್ಯಸಭೆಯಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಹೈದ್ರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಎತ್ತುತ್ತಿದ್ದಂತೆಯೇ ಗದ್ದಲ ಪ್ರಾರಂಭವಾಯಿತು. 
 
ದೇಶದಲ್ಲಿ ದಲಿತ ವಿದ್ಯಾರ್ಥಿಗಳ ಸ್ಥಿತಿ ಶೋಚನೀಯವಾಗಿದೆ. ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಅವರಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ ವಿಫಲವಾಗಿದೆ. ರೋಹಿತ್ ಆತ್ಮಹತ್ಯೆಗೆ ಹೊರಗಿನಿಂದ ಪ್ರೇರೇಪಿಸಲಾಗಿತ್ತು. ಆತನ ಸಾವಿನಲ್ಲಿ ಕೇಂದ್ರದ ಇಬ್ಬರು ಸಚಿವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದು ಮಾಯಾವತಿ ಆಗ್ರಹಿಸಿದರು. 
 
ಇದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು. ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೀಗಾಗಿ ಕಲಾಪವನ್ನು 10 ನಿಮಿಷಕ್ಕೆ ಮುಂದೂಡಲಾಯಿತು. 
 
ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳು ಮತ್ತು ಜೆಡಿಯು ಸಂಸತ್ತಿನ ಎದುರುಗಡೆ ಪ್ರತಿಭಟನೆಯನ್ನು ಕೈಗೊಂಡವು. 

ವೆಬ್ದುನಿಯಾವನ್ನು ಓದಿ