ಭ್ರಷ್ಟರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡಬೇಡಿ: ಮೋದಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ

ಬುಧವಾರ, 27 ಆಗಸ್ಟ್ 2014 (17:02 IST)
ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಸಂಸದರನ್ನು ಸಚಿವ ಪದವಿಯಿಂದ ಅನರ್ಹಗೊಳಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ನಿರಾಕರಿಸಿರುವ  ಸುಪ್ರೀಂ ಕೋರ್ಟ್‌ ಇದು ಪ್ರಧಾನಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ ಎಂದು ತೀರ್ಪು ನೀಡಿದೆ. 

ಕ್ರಿಮಿನಲ್ ಹಿನ್ನೆಲೆಯುಳ್ಳ ಮಂತ್ರಿಗಳನ್ನು ಕ್ಯಾಬಿನೇಟ್‌ನಲ್ಲಿ ಸೇರಿಸಿಕೊಳ್ಳುವ ವಿಚಾರ ಪ್ರಧಾನ ಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ ಎಂದಿರುವ ಅಪೆಕ್ಸ್ ಕೋರ್ಟ್ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಅಪರಾಧ ಹಿನ್ನೆಲೆಯುಳ್ಳವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಕೂಡದು ಎಂದು ಎಚ್ಚರಿಕೆ ನೀಡಿದೆ. 
 
ಭಾರತದ ಸಂವಿಧಾನ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಮೇಲೆ ಅಪಾರ ನಂಬಿಕೆಯನ್ನು ಇಟ್ಟಿದೆ. ಅವರು ಜವಾಬ್ದಾರಿ ಮತ್ತು ಸಾಂವಿಧಾನಿಕ ನೈತಿಕತೆ ಪ್ರಕಾರ ವರ್ತಿಸುವುದನ್ನು ನಿರೀಕ್ಷಿಸಲಾಗುವುದು ಎಂದು ದೇಶದ ಅತ್ಯುನ್ನತ ನ್ಯಾಯಾಲಯ ತೀರ್ಪು ಹೇಳಿದೆ.
 
ಕ್ರಿಮಿನಲ್ ಆರೋಪ ಹೊಂದಿರುವ ನಾಯಕರು ಸಚಿವ ಸಂಪುಟದಲ್ಲಿ ಇರಬಾರದು ಎಂದು ಭಾರತದ ಸಂವಿಧಾನ ಸೂಚಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಆರ್ ಎಮ್ ಲೋಧಾ ನೇತೃತ್ವದ ಪೀಠ ಐದು ಜನರ ನ್ಯಾಯಾಧೀಶರ ಪೀಠ ತಿಳಿಸಿದೆ. 
 
ಕಾನೂನಿನ ಜತೆ ಸಂಘರ್ಷದಲ್ಲಿರುವವರು, ನೈತಿಕತೆಯ ವಿರುದ್ಧ ಅಪರಾಧವೆಸಗಿದವರು ಹಾಗೂ ಭ್ರಷ್ಟಾಚಾರದ ಹಿನ್ನೆಲೆಯುಳ್ಳವರಿಗೆ ಮಂತ್ರಿಗಳಾಗಲು ಅವಕಾಶ ನೀಡಬಾರದು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
 
ಚುನಾವಣಾ ಅಫಿಡವಿಟ್ ಪ್ರಕಾರ, ಮೋದಿ ಸರಕಾರದ ಶೇಕಡ ಮೂವತ್ತರಷ್ಟು ಮಂತ್ರಿಗಳು ಅಪರಾಧ ಪ್ರಕರಣಗಳ ಆಪಾದನೆಯನ್ನು ಹೊತ್ತಿದ್ದಾರೆ. ಅವರಲ್ಲಿ 18 ಪ್ರತಿಶತದಷ್ಟು ಮಂತ್ರಿಗಳು "ಗಂಭೀರ ಮೊಕದ್ದಮೆಗಳನ್ನು" ಎದುರಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ