ಪೊರಕೆ ಹಿಡಿದುಕೊಂಡು ಶ್ರೀನಗರದ ಬೀದಿಗಳಲ್ಲಿ ಕಸ ಗುಡಿಸಿದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರವರನ್ನು ಮನಸಾರೆ ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ,ಇದೊಂದು "ಅದ್ಭುತ ಪ್ರಯತ್ನ"ವಾಗಿದ್ದು ಸ್ವಚ್ಛ ಭಾರತ ಅಭಿಯಾನಕ್ಕೆ ಇದು ಪುಷ್ಠಿ ನೀಡಲಿದೆ ಎಂದು ಹೇಳಿದ್ದಾರೆ.
'ಸ್ವಚ್ಛ ಭಾರತ್ ಅಭಿಯಾನ'ದ ಭಾಗವಾಗಿ ಬುಧವಾರ ರಾತ್ರಿ ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡ ಶ್ರೀನಗರ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳನ್ನು ಕೂಡಿಕೊಂಡ ಸಿಎಂ ಒಮರ್ ಅಬ್ದುಲ್ಲಾ ಪ್ರವಾಹದಿಂದ ಅತಿಯಾಗಿ ಸಮಸ್ಯೆಗೀಡಾಗಿರುವ ವೇರ್ ನಾಗರ್ ಪ್ರಾಂತ್ಯದ ರಸ್ತೆಗಳನ್ನು ಗುಡಿಸಿ ಸ್ವಚ್ಛಗೊಳಿಸಿದರು. ಆ ಸಂದರ್ಭದಲ್ಲಿ ಎಎಮ್ಸಿ ಕಮಿಷನರ್ ಜಿ ಎನ್ ಕಸ್ಬಾ ಕೂಡ ಅವರಿಗೆ ಸಾಥ್ ನೀಡಿದ್ದರು.