ಪ್ರಧಾನಿ ಬೆಳಗಾವಿಗೆ: ರೈತರಿಂದ ಪ್ರತಿಭಟನೆಯ ಸ್ವಾಗತ

ಶನಿವಾರ, 27 ಫೆಬ್ರವರಿ 2016 (09:36 IST)
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್ ಭೀಮಾ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸುತ್ತಿದ್ದು ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆದರೆ ಮೋದಿಯವರಿಗೆ ಪ್ರತಿಭಟನೆಯ ಸ್ವಾಗತ ಕೋರಲು ರೈತ ಸಂಘಟನೆಗಳು ನಿರ್ಧರಿಸಿವೆ.

ಮಧ್ಯಾಹ್ನ 3.30ರ ಸುಮಾರಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಪ್ರಧಾನಿ 4 ಗಂಟೆಗೆ ಹೆಲಿಕಾಪ್ಟರ್ ಮೂಲಕ ಸಮಾರಂಭ ನಡೆಯಲಿರುವ ಬೆಳಗಾವಿ ಹೊರವಲಯದ ನಾನಾವಾಡಿ ಬಳಿಯ ಅಂಗಡಿ ಕಾಲೇಜು ಮೈದಾನಕ್ಕೆ ತೆರಳಲಿದ್ದಾರೆ. 5.20ಕ್ಕೆ ಪ್ರಧಾನಿ ರೈತರನ್ನುದ್ದೇಶಿಸಿ ಭೀಮಾ ಪಸಲ್ ಯೋಜನೆ ಬಗ್ಗೆ  ಮಾತನಾಡಲಿದ್ದಾರೆ. ಉತ್ತರ ಕರ್ನಾಟಕದ ಸುಮಾರು 6 ಜಿಲ್ಲೆಯ ರೈತರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಬೃಹತ್ ವೇದಿಕೆ ನಿರ್ಮಾಣವಾಗಿದ್ದು 1 ಲಕ್ಷ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂದು ಸಂಜೆಯೇ ಪ್ರಧಾನಿ ನವದೆಹಲಿಗೆ ವಾಪಸ್ಸಾಗಲಿದ್ದಾರೆ. 
 
ಆದರೆ ರೈತರಿಗಾಗಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ  ರೈತರಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ. ಮೋದಿ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸದಂತೆ ಇಲ್ಲಿನ ರೈತ ಸಂಘಟನೆಗಳು, ಹಾಗೂ ಕಳಸಾ ಬಂಡೂರಿ ಹೋರಾಟ ಸಮಿತಿ ಕಾರ್ಯಕರ್ತರು ಮನವಿ ಮಾಡಿದ್ದಾರೆ. 
 
ಕಳಸಾ ಬಂಡೂರಿ ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ಮುತುವರ್ಜಿ ವಹಿಸಿಲ್ಲ ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ರೈತ ಆತ್ಮಹತ್ಯೆಗಳಿಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತ ಪಡಿಸಿರುವ 10ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಳಗಾವಿ ಡಿಸಿ ಕಚೇರಿ ಮುಂದೆ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 
 
ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದ್ದು 1 ಎಡಿಜಿಪಿ, ಮೂವರು ಐಜಿಪಿ, 15 ಎಸ್‌ಪಿ, 30 ಡಿವೈಎಸ್ ಪಿ, 60 ಸಿಪಿಐ, 20 ಕೆಎಸ್ ಆರ್ ತುಕಡಿ  ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು  ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ನಗರದ ವಿವಿಧ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. 

ವೆಬ್ದುನಿಯಾವನ್ನು ಓದಿ