ಮಧ್ಯಾಹ್ನ 3.30ರ ಸುಮಾರಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಪ್ರಧಾನಿ 4 ಗಂಟೆಗೆ ಹೆಲಿಕಾಪ್ಟರ್ ಮೂಲಕ ಸಮಾರಂಭ ನಡೆಯಲಿರುವ ಬೆಳಗಾವಿ ಹೊರವಲಯದ ನಾನಾವಾಡಿ ಬಳಿಯ ಅಂಗಡಿ ಕಾಲೇಜು ಮೈದಾನಕ್ಕೆ ತೆರಳಲಿದ್ದಾರೆ. 5.20ಕ್ಕೆ ಪ್ರಧಾನಿ ರೈತರನ್ನುದ್ದೇಶಿಸಿ ಭೀಮಾ ಪಸಲ್ ಯೋಜನೆ ಬಗ್ಗೆ ಮಾತನಾಡಲಿದ್ದಾರೆ. ಉತ್ತರ ಕರ್ನಾಟಕದ ಸುಮಾರು 6 ಜಿಲ್ಲೆಯ ರೈತರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಬೃಹತ್ ವೇದಿಕೆ ನಿರ್ಮಾಣವಾಗಿದ್ದು 1 ಲಕ್ಷ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂದು ಸಂಜೆಯೇ ಪ್ರಧಾನಿ ನವದೆಹಲಿಗೆ ವಾಪಸ್ಸಾಗಲಿದ್ದಾರೆ.
ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದ್ದು 1 ಎಡಿಜಿಪಿ, ಮೂವರು ಐಜಿಪಿ, 15 ಎಸ್ಪಿ, 30 ಡಿವೈಎಸ್ ಪಿ, 60 ಸಿಪಿಐ, 20 ಕೆಎಸ್ ಆರ್ ತುಕಡಿ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ನಗರದ ವಿವಿಧ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.