ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಳು ಸಮೀಪಿಸುತ್ತಿದ್ದು ಪ್ರಮುಖ ಪಕ್ಷಗಳಲ್ಲಿ ಪ್ರಚಾರದ ಕಾವು ತೀವೃತೆ ಪಡೆದುಕೊಂಡಿದೆ. ಆಪ್ ಬಿಜೆಪಿ ಕೆಸರೆರೆಚಾಟವು ಸಹ ಹೆಚ್ಚಿದ್ದು, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಆಮ್ ಆದ್ಮಿ ಪಕ್ಷದ ಮೇಲೆ ದಾಳಿ ನಡೆಸುವುದನ್ನು ಮುಂದುವರೆಸಿದ್ದಾರೆ.
ಆಪ್ ನಾಯಕರೇ ಕಾಮಪ್ರಚೋದಕ ಮಾತುಗಳನ್ನಾಡುವುದು, ವಿಕೃತ ಮನೋಭಾವವನ್ನು ಪ್ರದರ್ಶಿಸುವುದನ್ನು ಮಾಡಿದರೆ ಆಪ್ ನಾಯಕತ್ವದಿಂದ ಮಹಿಳೆಯರು ಯಾವ ವಿಧದ ಭದ್ರತೆ ಮತ್ತು ಗೌರವವನ್ನು ನಿರೀಕ್ಷಿಸಬಹುದು ಎಂದು ಅವರು ಟ್ವಿಟ್ ಮಾಡಿದ್ದಾರೆ. ತಮ್ಮ ವಿರುದ್ಧ ಸೆಕ್ಸಿಸ್ಟ್ ಹೇಳಿಕೆ ನೀಡಿದ ಆಪ್ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಪ್ನ್ನು ಮಹಿಳಾ ವಿರೋಧಿ ಎಂದು ಜರಿದಿರುವ ಬಿಜೆಪಿ ನಾಯಕ ಶಹನವಾಝ್ ಹುಸೇನ್ ಕಿರಣ್ ಬೇಡಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆಪ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುವುದು ಎಂದಿದ್ದಾರೆ. ಆಪ್ನ ಕೆಳಮಟ್ಟದ ಭಾಷಾ ಪ್ರಯೋಗದ ವಿರುದ್ಧವೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ. ಶುಕ್ರವಾರ ಬಿಜೆಪಿ ಆಪ್ ನಾಯಕ ಕೇಜ್ರಿವಾಲ್ಗೆ 5 ಪ್ರಶ್ನೆಗಳುಳ್ಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಒಂದು ಪ್ರಶ್ನೆ ಏನೆಂದರೆ ಮಹಿಳಾ ನಾಯಕರು ಯಾಕೆ ಆಪ್ನ್ನು ತ್ಯಜಿಸುತ್ತಿದ್ದಾರೆ? ಎಂಬುದು.