ಪ್ರತಿಪಕ್ಷ ನಾಯಕನ ಹುದ್ದೆ ಖಾಲಿ: ಆದರೆ ಲೋಕಪಾಲ ರಚನೆ ಹೇಗೆ?

ಶುಕ್ರವಾರ, 22 ಆಗಸ್ಟ್ 2014 (13:03 IST)
ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಹುದ್ದೆ ಖಾಲಿವುಳಿದಿರುವ ಬಗ್ಗೆ ತನಗೆ ಕಳವಳ ಉಂಟಾಗಿದೆ ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ತಿಳಿಸಿದೆ. ಪ್ರತಿಪಕ್ಷದ ಸ್ಥಾನ ಸರ್ಕಾರಕ್ಕೆ ಭಿನ್ನವಾದ ಧ್ವನಿಯನ್ನು ಮುಟ್ಟಿಸುವುದರಿಂದ ಆ ಸ್ಥಾನ ನಿರ್ಣಾಯಕ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಕೇಂದ್ರಕ್ಕೆ ತನ್ನ ಪ್ರತಿಕ್ರಿಯೆಯನ್ನು ತಿಳಿಸಲು ನಾಲ್ಕು ವಾರಗಳ ಸಮಯಾವಕಾಶ ನೀಡಲಾಗಿದೆ. 
 
ತಮ್ಮ ಪಕ್ಷ ಏಕೈಕ ದೊಡ್ಡ ಪಕ್ಷವಾಗಿದ್ದು, ಕಾಂಗ್ರೆಸ್ ಲೋಕಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪ್ರತಿಪಾದಿಸಿದೆ.  ಆದರೆ ಸ್ಪೀಕರ್ ಸುಮಿತ್ರಾ ಮಹಾಜನ್ ಅದನ್ನು ತಳ್ಳಿಹಾಕಿದ್ದು, ಈ ಹುದ್ದೆಗೆ ಕನಿಷ್ಠ 55 ಸದಸ್ಯರ ಬಲ ಹೊಂದಿರಬೇಕು ಎಂಬ ನಿಯಮವನ್ನು ಉದಾಹರಿಸಿದ್ದಾರೆ. ಕಾಂಗ್ರೆಸ್ ಕೇವಲ 44 ಸದಸ್ಯಬಲ ಹೊಂದಿದೆ. 
 
ಲೋಕಪಾಲಕ್ಕೆ 9 ಸದಸ್ಯರ ನೇಮಕಕ್ಕೆ ವಿಳಂಬ ಮಾಡಿರುವುದಕ್ಕೆ ವಿವರಣೆ ಕೇಳಿದ ಕೇಸಿಗೆ ಸಂಬಂಧಿಸಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾಗ, ನ್ಯಾಯಾಧೀಶರು ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ. 
 
ವಕೀಲ, ಕಾರ್ಯಕರ್ತ, ಆಮ್ ಆದ್ಮಿ ಮುಖಂಡ ಪ್ರಶಾಂತ್ ಭೂಷಣ್ ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿಸಿದ್ದರು. ಲೋಕಪಾಲ ಸದಸ್ಯರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರತಿಪಕ್ಷದ ನಾಯಕ, ಪ್ರಧಾನಮಂತ್ರಿ ಮತ್ತು ಭಾರತದ ಮುಖ್ಯನ್ಯಾಯಮೂರ್ತಿ ನಿಯಮದ ರೀತ್ಯ ಒಳಗೊಂಡಿರಬೇಕು ಎಂದು ನ್ಯಾಯಾಧೀಶರು ಗಮನಸೆಳೆದರು. ಆದರೆ ಲೋಕಸಭೆಗೆ ಪ್ರತಿಪಕ್ಷದ ನಾಯಕರೇ ಇಲ್ಲದೇ ಲೋಕಪಾಲ ರಚನೆ ಮಾಡೋದು ಹೇಗೆ ಎನ್ನುವುದೇ ಈಗಿನ ಪ್ರಶ್ನೆಯಾಗಿದೆ. 

ವೆಬ್ದುನಿಯಾವನ್ನು ಓದಿ