ಇತ್ತೀಚಿಗೆ ಬಿಡುಗಡೆಯಾಗಿರುವ ಜನಗಣತಿ ವರದಿ ಪ್ರಕಾರ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ವೃದ್ಧಿಯಾಗಿರುವುದು ಸಾಬೀತಾಗಿದ್ದು, ಇದು ಹಿಂದೂ ಸಂಘಟನೆಗಳ ಆತಂಕವನ್ನು ಹೆಚ್ಚಿಸಿದೆ ಎಂಬುದು ಸಂಬಂಧಿಸಿದ ಸಂಘಟನೆಗಳ ನಾಯಕರ ಹೇಳಿಕೆಗಳಿಂದಲೇ ವೇದ್ಯವಾಗುತ್ತಿದೆ.
ಭಾನುವಾರ ವಿಶ್ವ ಹಿಂದೂ ಪರಿಷತ್ ನಾಯಕರು ಸಹ ಈ ಕುರಿತು ಮಾತನಾಡಿದ್ದು, ಮುಸ್ಲಿಮರ "ಜನಸಂಖ್ಯೆ ಜಿಹಾದ್" ಹಿಂದುಗಳ ಅಳಿವಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ ದೇಶಾದ್ಯಂತ ಎರಡು ಮಕ್ಕಳನ್ನಷ್ಟೇ ಹೊಂದುವ ಕಾಯಿದೆ ತರಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ವಿಹೆಚ್ಪಿಯ ಕಾರ್ಯಕಾರಿ ಅಧ್ಯಕ್ಷರಾದ ಪ್ರವೀಣ್ ತೊಗಾಡಿಯಾ, ಒಂದು ಕಡೆ ಮುಸ್ಲಿಂ ಜನಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗುತ್ತಿದ್ದರೆ, ಹಿಂದೂ ಜನಸಂಖ್ಯೆಯಲ್ಲಿ ಕುಸಿತವಾಗುತ್ತಿದೆ ಎಂದು ಆರ್ಎಸ್ಎಸ್ ಮುಖವಾಣಿ 'ಆರ್ಗನೈಸರ್'ನಲ್ಲಿ ಅವರು ತಮ್ಮ ಕಳವಳವನ್ನು ಹೊರ ಹಾಕಿದ್ದಾರೆ.
"ಈಗಲೂ ನಾವು 'ಜನಸಂಖ್ಯೆ ಜಿಹಾದ್' ವಿರುದ್ಧ ಎದ್ದು ನಿಲ್ಲದೆ ಹೋದರೆ, ಭಾರತ ಶೀಘ್ರದಲ್ಲೇ ಇಸ್ಲಾಮಿಕ್ ರಾಜ್ಯವಾಗಿ ಬಿಡುತ್ತದೆ. ರಾಜಕೀಯ ಒತ್ತಡವನ್ನು ಲೆಕ್ಕಿಸದೇ ಇಬ್ಬರು ಮಕ್ಕಳನ್ನು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ತರುಲೇಬೇಕಿದೆ. ಇತ್ತೀಚಿನ ಜನಗಣತಿ ವರದಿ ಎದ್ದು ನಿಲ್ಲಲೇ ಬೇಕಾದ ಸಂದೇಶವನ್ನು ನೀಡಿದೆ", ಎಂದು ತೊಗಾಡಿಯಾ ಎಚ್ಚೆತ್ತುಕೊಳ್ಳುವಂತೆ ತಮ್ಮ ಸಮುದಾಯದವರಲ್ಲಿ ಕರೆ ನೀಡಿದ್ದಾರೆ.