ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಆಶ್ಚರ್ಯ ಮೂಡಿಸಿದರು. ದಕ್ಷಿಣ ದೆಹಲಿಯ ದೌಲಾಕೌನ್ ರೈಲ್ವೆ ನಿಲ್ದಾಣದಿಂದ ತಮ್ಮ ಪ್ರಯಾಣನ್ನು ಆರಂಭಿಸಿದ ಮೋದಿಯವರು ನೈಋತ್ಯ ದೆಹಲಿಯ ದ್ವಾರಕಾ ಸೆಕ್ಟರ್ 21 ನಿಲ್ದಾಣದಲ್ಲಿ ಇಳಿದರು.
ರಾಷ್ಟ್ರೀಯ ಗುಪ್ತಚರ ಅಕಾಡೆಮಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದ್ವಾರಕಾಗೆ ತೆರಳುತ್ತಿದ್ದ ಮೋದಿಯವರು ತಮಗೆ ನೀಡಲಾಗುವ ಭದ್ರತಾ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ಮೆಟ್ರೋದಲ್ಲಿ ಪ್ರಯಾಣಿಸಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಸಂದರ್ಭದಲ್ಲಿ ಪ್ರಧಾನಿಗೆ ಸಾಥ್ ನೀಡಿದರು.
‘ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಂತೆ ಶ್ರೀಧರನ್ ಅವರು ಅನೇಕ ಸಲ ಹೇಳಿದ್ದರು. ಇಂದು ದ್ವಾರಕಾಗೆ ತೆರಳಬೇಕಾಗಿದ್ದರಿಂದ ಅಂತಹ ಅವಕಾಶ ಸಿಕ್ಕಿತು. ಇದು ನನಗೆ ತುಂಬ ಆಹ್ಲಾದಕರ ಅನುಭವವನ್ನು ನೀಡಿತು, ದೆಹಲಿ ಮೆಟ್ರೋ ಹಾಗೂ ಶ್ರೀಧರನ್ ಅವರಿಗೆ ಧನ್ಯವಾದಗಳು’ ಎಂದು ಪ್ರಯಾಣದ ಬಳಿಕ ಮೋದಿ ಟ್ವೀಟ್ ಮಾಡಿದ್ದಾರೆ.
ದೆಹಲಿ ಮೆಟ್ರೋ ರೈಲು ನಿಗಮದ ಮಾಜಿ ಮುಖ್ಯಸ್ಥರಾಗಿರುವ ಶ್ರೀಧರನ್ 'ಮೆಟ್ರೋ ಮ್ಯಾನ್' ಎಂದೇ ಗುರುತಿಸಲ್ಪಡುತ್ತಾರೆ.