ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಜಾತ್ಯಾತೀತ ಪಕ್ಷಗಳ ಜನತಾ ಪರಿವಾರದ ನಾಯಕರು ಇಂದು ಇಲ್ಲಿನ ಜಂತರ್ ಮಂತರ್ನಲ್ಲಿ ಒಂದೆಡೆ ಸೇರಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುವ ಮೂಲಕ ಮತ್ತೊಮ್ಮೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ವಿದೇಶದಲ್ಲಿರುವ ಕಪ್ಪುಹಣ ವಾಪಾಸ್ ತರುವುದು, ರಾಷ್ಟ್ರವನ್ನು ಗುಡಿಸಲು ಮುಕ್ತಗೊಳಿಸುವುದು, ಅಗತ್ಯ ನೀರು ಪೂರೈಕೆ, ಒಡಾಟಕ್ಕೆ ಸೂಕ್ತ ರಸ್ತೆ ನಿರ್ಮಾಣ ಸೇರಿದಂತೆ ಹಲವು ಆಶ್ವಾಸನೆಗಳನ್ನು ನೀಡಿತ್ತು. ಆದರೆ ಇವುಗಳಲ್ಲಿ ಯಾವುದನ್ನೂ ಕೂಡ ಸರ್ಕಾರ ಸಮರ್ಪಕವಾಗಿ ನೆರವೇರಿಸುತ್ತಿಲ್ಲ ಎಂದು ನಾಯಕರು ದೂರಿದ್ದಾರೆ.
ಇನ್ನು ಪ್ರತಿಭಟನೆಯಲ್ಲಿ ಜನತಾ ಪರಿವಾರದ ಎನ್ನಲಾ ನಾಯಕರೂ ಭಾಗಿಯಾಗಿದ್ದು, ಜೆಡಿಎಸ್ನ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್, ಐಎನ್ಎಡಿ ಪಕ್ಷದ ರಾಷ್ಟ್ರಾಧ್ಯಕ್ಷ ಓಂ ಪ್ರಕಾಶ್ ಚೌಟಾಲಾ, ಜೆಡಿಯು ರಾಷ್ಚ್ರಾಧ್ಯಕ್ಷ ಶರದ್ ಯಾದವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಜನತಾ ಪರಿವಾರದ ಎಲ್ಲಾ ಮುಖಂಡರೂ ಭಾಗವಹಿಸಿದ್ದು, ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಎಸ್ಪಿ, ಬಿಎಸ್ಪಿ, ಜೆಡಿಯು, ಜೆಡಿಎಸ್, ಎಲ್ಜೆಡಿ, ಎಸ್ಜೆಪಿ ಹಾಗೂ ಐಎನ್ಎಲ್ಡಿ ಪಕ್ಷಗಳ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ಕಪ್ಪು ಬಾವುಟ ತೋರಿಸುವ ಮೂಲಕ ಸಮರ ಸಾರುತ್ತಿದ್ದಾರೆ.