ದನದ ಮಾಂಸ ತಿನ್ನುವ ರಾಹುಲ್ ಗಾಂಧಿ ಕೇದಾರ್‌ನಾಥ್‌ಗೆ ಭೇಟಿ ನೀಡಿದ್ದು ಭೂಕಂಪಕ್ಕೆ ಕಾರಣವಂತೆ!

ಮಂಗಳವಾರ, 28 ಏಪ್ರಿಲ್ 2015 (14:56 IST)
ಸದಾ ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೊಂದು ಹೇಳಿಕೆಯನ್ನು ನೀಡಿ ರಾಜಕೀಯ ವಲಯದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದಾರೆ. ನೆರೆಯ ನೇಪಾಳ ಮತ್ತು ಉತ್ತರ ಭಾರತದಲ್ಲಾದ ಭೀಕರ ಭೂಕಂಪಕ್ಕೆ ರಾಹುಲ್ ಗಾಂಧಿ ದನದ ಮಾಂಸ ತಿನ್ನುವುದೇ ಕಾರಣ ಎಂಬ ಅಸಂಬದ್ಧ ಹೇಳಿಕೆಯನ್ನವರು ನೀಡಿದ್ದಾರೆ. 

ದನದ ಮಾಂಸ ತಿನ್ನುವ ರಾಹುಲ್ ಗಾಂಧಿ ಶುದ್ಧೀಕರಣ ಮಾಡಿಕೊಳ್ಳದೇ ಪವಿತ್ರ ಸ್ಥಳ ಕೇದಾರನಾಥನ ಸನ್ನಿಧಿಗೆ ಭೇಟಿಯಿತ್ತಿದ್ದು ವಿನಾಶಕಾರಿ ಭೂಕಂಪ ಜರುಗಲು ಕಾರಣವಾಯಿತು ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾಗಿ ಹರಿದ್ವಾರದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. 
 
ಕಳೆದ ವಾರ ರಾಹುಲ್ ಗಾಂಧಿ ಕೇದಾರನಾಥ್‌ಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನು ಆಡಿದ್ದಾರೆ. 
 
ಸಾಕ್ಷಿ ಮಹಾರಾಜ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಕೆರಳಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ. 
 
ಕಳೆದ ಶನಿವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ನೇಪಾಳದಲ್ಲಿ 4000ಕ್ಕಿಂತಲೂ ಹೆಚ್ಚು ಜನರು ಮತ್ತು ಭಾರತದಲ್ಲಿಯೂ ಸಹ 70 ಕ್ಕಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.  

ವೆಬ್ದುನಿಯಾವನ್ನು ಓದಿ