ಬೆಂಗಳೂರು ನಿವಾಸಿ ತಿಕಮ್ ಚಂದ್ ಜೈನ್ (65) ರಾಜಧಾನಿ ಎಕ್ಸ್ಪ್ರೆಸ್ನಂತ ಡೀಲಕ್ಸ್ ರೈಲಿನಲ್ಲಿ ಪ್ರಯಾಣ ಮಾಡುವಾಗ ಈ ಅವ್ಯವಸ್ಥೆಗೆ ಸಾಕ್ಷಿಯಾದರು. ಸೆಪ್ಟಂಬರ್ 19 ರಂದು ದೆಹಲಿಯಿಂದ ಗೌಹಾತಿಗೆ ಪ್ರಯಾಣ ಬೆಳೆಸುತ್ತಿದ್ದ ಅವರು ವೆಜಿಟೇರಿಯನ್ ಆಹಾರವನ್ನು ಕೊಂಡುಕೊಂಡರು. ಪರಿಶುದ್ಧ ಸಸ್ಯಾಹಾರ ಎಂದು ಕೊಂಡುಕೊಂಡ ಆಹಾರದಲ್ಲಿ ಮೂಳೆಗಳು ಕಂಡು ಬಂದಿದ್ದರಿಂದ ಪ್ಯಾಂಟ್ರಿ ವ್ಯವಸ್ಥಾಪಕರಿಗೆ ಅವರು ದೂರು ನೀಡಿದರು. ಆದರೆ ತಪ್ಪನ್ನು ಒಪ್ಪಿಕೊಳ್ಳದ ಅವರು ಜೈನ್ ಮೇಲೆಯೇ ಹರಿಹಾಯ್ದರು.
ಗೌಹಾತಿ ತಲುಪಿದ ಕೂಡಲೇ ಮಾಧ್ಯಮಗಳನ್ನು ಸಂಪರ್ಕಿಸಿ ರೇಲ್ವೇ ಇಲಾಖೆಯ ಈ ಆವಾಂತರವನ್ನು ಅವರು ಬಿಚ್ಚಿಟ್ಟರು. ಅವರ ಮೇಲೆ ರೇಗಾಡಿದ್ದ ಪ್ಯಾಂಟ್ರಿ ಕಾರ್ ಮ್ಯಾನೇಜರ್ ತಮ್ಮ ತಪ್ಪನ್ನು ಒಪ್ಪಿಕೊಂಡರು. ರವಿವಾರ ಮರಳಿ ಬೆಂಗಳೂರು ತಲುಪಿದ ಜೈನ್ ಭಾರತೀಯ ರೇಲ್ವೇ ಪ್ರಧಾನ ಕಚೇರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದು, ಪ್ರತ್ಯುತ್ತರ ಇನ್ನೂ ಬರಬೇಕಿದೆ.