ಉದ್ವಿಗ್ನತೆಯ ನಡುವೆ ಪಾಕ್‌ಗೆ ರಾಜನಾಥ್ ಸಿಂಗ್

ಗುರುವಾರ, 28 ಜುಲೈ 2016 (14:52 IST)
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮುಂದಿನವಾರ  ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಇಸ್ಲಾಮಾಬಾದ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಆಗಸ್ಟ್ 3 ಮತ್ತು 4 ರಂದು ಸಭೆ ನಡೆಯಲಿದೆ. ಶೃಂಗ ಸಭೆ ಸಂದರ್ಭದಲ್ಲಿ ಸಿಂಗ್ ಪಾಕ್ ಪ್ರಧಾನಿ ನವಾಜ್ ಷರೀಫ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಪಠಾಣಕೋಟ್ ವಾಯುನೆಲೆ ಮೇಲಿನ ದಾಳಿಯ ಬಳಿಕ  ಸಂಪುಟ ದರ್ಜೆ ಸಚಿವರೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.  ಕಾಶ್ಮೀರ ಹಿಂಸಾಚಾರ ಕುರಿತಂತೆ  ಮೂಗು ತೂರಿಸಿದ್ದ ಪಾಕಿಸ್ತಾನಕ್ಕೆ ನಮ್ಮ ಆಂತರಿಕೆ ವಿಷಯಗಳಲ್ಲಿ ಮಧ್ಯ ಪ್ರವೇಶಿಸದಂತೆ ಸಿಂಗ್ ತಕ್ಕ ಉತ್ತರ ನೀಡಿದ್ದರು.  ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದು ಆರೋಪಿಸಿದ್ದ ಸಿಂಗ್,ಶ್ರೀನಗರದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಶಸ್ತ್ರಾಸ್ತಗಳನ್ನು ಕೈಗೆತ್ತಿಕೊಳ್ಳಲು ಯುವಕರನ್ನು  ಸರಿಯಲ್ಲ ಎಂಬುದನ್ನು ನೆರೆಯ ರಾಷ್ಟ್ರ ಅರ್ಥ ಮಾಡಿಕೊಳ್ಳಬೇಕು ಎಂದು ಖಡಕ್ ಆಗಿ ಸೂಚನೆ ನೀಡಿದ್ದರು.

ಜಮ್ಮು ಮತ್ತು ಕಾಶ್ಮೀರ ಸದ್ಯದಲ್ಲಿಯೇ ಪಾಕಿಸ್ತಾನವನ್ನು ಸೇರಿಕೊಳ್ಳಲಿದೆ ಎಂದು ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರು ಈಚೆಗೆ ಪಿಓಕೆ ಚುನಾವಣೆಯನ್ನು ಗೆದ್ದುಕೊಂಡ ಸಂದರ್ಭದಲ್ಲಿ ಹೇಳಿರುವುದು ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹದಗೆಡಲು ಕಾರಣವಾಗಿದೆ.

ಷರೀಫ್ ಅವರ ಈ ಅಪಾಯಕಾರಿ ಕನಸು ಭೂಮಿ ಇರುವಷ್ಟು ಕಾಲ ನನಸಾಗುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭೂಮಿಯ ಮೇಲಿನ ಈ ಸ್ವರ್ಗವನ್ನು ಭಯೋತ್ಪಾದಕರ ನರಕವನ್ನಾಗಿ ಮಾಡಲು ನಿಮ್ಮಿಂದ ಸಾಧ್ಯವಿಲ್ಲ  ಎಂದು  ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಗುಡುಗಿದ್ದರು.

ಸಾರ್ಕ್ ಆಂತರಿಕ / ಗೃಹ ಮಂತ್ರಿಗಳು ಮೊದಲ ಸಭೆ ಮೇ 11 , 2006 ರಂದು ಢಾಕಾದಲ್ಲಿ ನಡೆದಿತ್ತು. ಎರಡನೆಯ ಸಭೆ 2007ರಲ್ಲಿ ನವದೆಹಲಿಯಲ್ಲಿ ನಡೆದಿತ್ತು.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ