ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಲ್ಲ : ಸಮಾಜವಾದಿ ಸಂಸದ

ಸೋಮವಾರ, 11 ಆಗಸ್ಟ್ 2014 (16:18 IST)
ರಾಜ್ಯಸಭೆಯಲ್ಲಿ ಸಚಿನ್ ತೆಂಡೂಲ್ಕರ್  ಅನುಪಸ್ಥಿತಿಯ ಬಗ್ಗೆ ಅಸಮಾಧಾನಗೊಂಡಿರುವ  ಸಮಾಜವಾದಿ ಸಂಸದರೊಬ್ಬರು ಸಚಿನ್ ಕ್ರಿಕೆಟ್ ಆಟದ ದೇವರೆಂದು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.  


 
"ಸಚಿನ್ ಕ್ರಿಕೆಟ್ ದೇವರೆಂದು ನಾನು ಒಪ್ಪುವುದಿಲ್ಲ.  ಅನೇಕ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಕ್ರಿಕೆಟಿಗರಿಗೆ ದೇವರ ಸ್ಥಾನ ನೀಡಿದರೆ ಪೂಜೆ-ಪ್ರಾರ್ಥನೆಗಳಿಗೆ ಬಹಳಷ್ಟು ತೊಂದರೆಯಾಗುತ್ತದೆ " ಎಂದು ಮುಲಾಯಂ ಸಿಂಗ್ ಯಾದವ್ ಅವರ ಪಕ್ಷದ ರಾಜ್ಯಸಭಾ ಸದಸ್ಯರಾಗಿರುವ  ನರೇಶ್ ಅಗರ್ವಾಲ್ ಹೇಳಿದ್ದಾರೆ. 
 
ಕ್ರೀಡಾ ಮೀಸಲಾತಿಯಡಿಯಲ್ಲಿ ರಾಜ್ಯಸಭೆಗೆ ನಾಮನಿರ್ದೇಶಿತರಾಗಿರುವ  ತೆಂಡೂಲ್ಕರ್  ಸದನದ ಕಲಾಪಗಳಲ್ಲಿ ಹಾಜರಾಗುತ್ತಿಲ್ಲ ಎಂದು ಕಳೆದೊಂದು ವಾರದಿಂದ ಪ್ರಶ್ನಿಸಲ್ಪಡುತ್ತಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ಕೌಟುಂಬಿಕ ತುರ್ತು ಪರಿಸ್ಥಿತಿಯ ಕಾರಣಕ್ಕೆ ತಾವು ಅಧಿವೇಶನಕ್ಕೆ ಹಾಜರಾಗಲಾಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು ಮತ್ತು ರಾಜ್ಯಸಭೆಯಿಂದ ಈ ಸಂಪೂರ್ಣ ಅಧಿವೇಶನದ ಅವಧಿಗಾಗಿ ರಜೆಯನ್ನು ಪಡೆದುಕೊಂಡಿದ್ದಾರೆ. 
 
ಅವರಿಗೆ ರಾಜ್ಯಸಭೆಯಿಂದ ರಜೆ ಮಂಜೂರಾಗಿರುವುದಕ್ಕೆ  ಪ್ರತಿಯಾಗಿ ಅಗ್ರವಾಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 
 
ತೆಂಡೂಲ್ಕರ ಸದನಕ್ಕೆ ಗೌರವ ನೀಡುತ್ತಿಲ್ಲ ಎಂದು ಅವರು ಈ ಮೊದಲು ಹೇಳಿಕೆ ನೀಡಿದ್ದರು. 
 
"ಅವರು ದೆಹಲಿಗೆ ಬಂದಿದ್ದರು. ವಿಜ್ಞಾನ ಭವನಕ್ಕೆ  ಹೋಗಿದ್ದರು. ಆದರೆ ರಾಜ್ಯಸಭೆಗೆ ಬರದಾದರು. ಸಂಸತ್ತಿನ ಸದಸ್ಯರೊಬ್ಬರು ದೆಹಲಿಗೆ ಬರುತ್ತಾರೆ ಮತ್ತು ಅಧಿವೇಶನಕ್ಕೆ ಬರುತ್ತಿಲ್ಲ ಎಂದಾದರೆ ಅವರು ಸಂಸತ್ತನ್ನು ಗೌರವಿಸುತ್ತಿಲ್ಲ ಎಂದು ಅರ್ಥವಾಗುತ್ತದೆ.  ದೆಹಲಿಯಲ್ಲಿದ್ದಾಗಲೂ ಕಲಾಪದಿಂದ ಯಾಕೆ ಹೊರಗಿದ್ದರು ಎಂಬುದಕ್ಕೆ ಸಚಿನ್ ಉತ್ತರ ನೀಡಬೇಕು" ಎಂದು ಅವರು ಆಗ್ರಹಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ