ಪದ್ಮಶ್ರೀ ತಿರಸ್ಕರಿಸಿದ ಸಲ್ಮಾನ್ ತಂದೆ

ಮಂಗಳವಾರ, 27 ಜನವರಿ 2015 (10:29 IST)
ಖ್ಯಾತ ಚಿತ್ರ ಸಾಹಿತಿ,  ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಸಲೀಮ್ ಖಾನ್ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ತಿರಸ್ಕರಿಸಿದ್ದಾರೆ. ತಾನು ಹಿಂದಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗೆ ಹೋಲಿಸಿದರೆ ಈ ಪ್ರಶಸ್ತಿ ಕಡಿಮೆ ಎಂಬುದು ಅವರ ಬೇಸರಕ್ಕೆ ಕಾರಣ.
 
ಹಿಂದಿ ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಗಳಿಗೆ ಹೋಲಿಸಿದರೆ ನಾನು ಪದ್ಮಶ್ರೀಗಿಂತ ಹೆಚ್ಚಿನ ಗೌರವಕ್ಕೆ ಅರ್ಹ. ಮಾಧ್ಯಮಗಳಲ್ಲಿ ಬಂದ ವದಂತಿಗಳ ಪ್ರಕಾರ ನಾನು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ತಯಾರಾಗಿದ್ದೆ. ಆದರೆ ಕ್ಷಮಿಸಿ, ಪದ್ಮಶ್ರೀ ಸ್ವೀಕಾರಾರ್ಹವಲ್ಲ. ಇದನ್ನು ಪಡೆಯಲು ನಾನು ನಿರಾಕರಿಸುತ್ತೇನೆ. ಸಾಕಷ್ಟು ಸಾಧನೆ ಮಾಡಿರುವ ತನಗೆ ಈ ವಯಸ್ಸಿನಲ್ಲಿ ಈ ಪ್ರಶಸ್ತಿ ಬೇಕಾಗಿರಲಿಲ್ಲ. ತಮಗೆ ಹಲವು ವರ್ಷಗಳ ಹಿಂದೆಯೇ ಈ ಪ್ರಶಸ್ತಿ ಬಂದಿದ್ದರೆ ಸ್ವೀಕರಿಸುತ್ತಿದ್ದೆ ಎಂದು  ಅವರು ಹೇಳಿದ್ದಾರೆ. ತಮಗೆ ಪದ್ಮಭೂಷಣ ಅಥವಾ ಪದ್ಮವಿಭೂಷಣ ಪ್ರಶಸ್ತಿಯನ್ನಾದರೂ ಕೊಡಬೇಕಿತ್ತೆನ್ನುವುದು ಸಲೀಮ್ ಖಾನ್ ಅವರ ಬಯಕೆ.
 
"ಹಿಂದಿನ ಕೇಂದ್ರ ಸರ್ಕಾರಗಳೆಲ್ಲ ನನ್ನನ್ನು ಕಡೆಗಣಿಸುತ್ತಾ ಬಂದಿವೆ. ಚಿತ್ರೋದ್ಯಮದಲ್ಲಿ ನನ್ನ ಸಮಕಾಲೀನರು ಹಾಗೂ ಕಿರಿಯರೆಲ್ಲರಿಗೂ ಗೌರವ ಸಿಕ್ಕಿದೆ. ಆದರೆ, ನನ್ನನ್ನು ಯಾರೂ ಪರಿಗಣಿಸಲಿಲ್ಲ. 3 ಹಿಂದೆ ನನ್ನ ಹೆಸರು ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿದೆ ಎಂಬ ಸುದ್ದಿ ಕೇಳಿ ಸಂತೋಷವಾಗಿತ್ತು. ಆದರೆ, ಪದ್ಮಶ್ರೀ ನನ್ನ ಸಾಧನೆಗೆ ಸಮವಲ್ಲ ಎಂದು ಸಲೀಮ್ ಖಾನ್ ಹೇಳಿಕೊಂಡಿದ್ದಾರೆ.
 
ಆದರೆ ತನ್ನನ್ನು ಕಡೆಗಣಿಸದ ಕೇಂದ್ರ ಸರ್ಕಾರಕ್ಕೆ ಸಲೀಮ್ ಖಾನ್ ಧನ್ಯವಾದವನ್ನೂ ಅರ್ಪಿಸಿದ್ದಾರೆ.
 
ಸಲೀಂ ಖಾನ್ ಅವರಂತೇ ಬಾಬಾ ರಾಮದೇವ್ ಮತ್ತು ಪಂಡಿತ್ ರವಿಶಂಕರ್ ಗುರೂಜಿ ಸಹ ಈಗಾಗಲೇ ಪದ್ಮ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ