ಅವಮಾನಕರ ದೋಷ: ನಿರಪರಾಧಿ ಕಾರ್ಗಿಲ್ ಯೋಧನ ಮೇಲೆ ಶಾಂತಿ ಕದಡಿದ ಆರೋಪ

ಮಂಗಳವಾರ, 19 ಆಗಸ್ಟ್ 2014 (17:20 IST)
ದೇಶಕ್ಕೆ ದೇಶವೇ ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಘಟನೆ  ಔರಂಗಾಬಾದ್‌ನಲ್ಲಿರುವ ಗ್ರಾಮ ಅಹಿರ್ ಎಂಬಲ್ಲಿ  ಘಟಿಸಿದ್ದು, ದೇಶಕ್ಕಾಗಿ ಹೋರಾಡಿ, ಪರಮ ವೀರ ಚಕ್ರ ಪ್ರಶಸ್ತಿ ಪಡೆದಿರುವ ಕಾರ್ಗಿಲ್ ಹೀರೋ  ಯೋಗೇಂದ್ರ ಸಿಂಗ್ ಯಾದವ್ ಎಂಬುವವರು ತಮ್ಮ ಗ್ರಾಮದಲ್ಲಿ  ಶಾಂತಿಯನ್ನು ಕದಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಏತನ್ಮಧ್ಯೆ, ತಾವು ಮಾಡಿದ್ದು ಗಂಭೀರ ತಪ್ಪು ಎಂದು ತಿಳಿದು ಕಸಿವಿಸಿಗೊಂಡ ಪೋಲಿಸರು ಅವರನ್ನು ಆರೋಪ ಮುಕ್ತಗೊಳಿಸುವ ಭರವಸೆ ನೀಡಿದ್ದಾರೆ. 
 
ಪ್ರಸ್ತುತ ಬರೇಲಿಯ ಸುಬೇದಾರ್ ಆಗಿ ಸೇವೆಸಲ್ಲಿಸುತ್ತಿರುವ ಯೋಗೇಂದ್ರ, ಖುದ್ದಾಗಿ ಗಾಜಿಯಾಬಾದ್ ನ್ಯಾಯಾಲಯಕ್ಕೆ  ಹಾಜರಾಗುವಂತೆ ಆಗಸ್ಟ್ 22 ರಂದು ನ್ಯಾಯಾಲಯದಿಂದ ಆದೇಶ ಪಡೆದರು.
 
ಅವರ ಜತೆ  ಸಹೋದರರಾದ ಜಿತೇಂದ್ರ ಮತ್ತು ದೇವೇಂದ್ರ ಅವರನ್ನು  ಕೂಡ ಕೋರ್ಟ್‌ಗೆ ಬರುವಂತೆ ಹೇಳಲಾಗಿತ್ತು. 
 
ವಾಸ್ತವವಾಗಿ ಯೋಧನ ಸಹೋದರ ದೇವೇಂದ್ರನ ಜತೆ ಅವರದೇ ಹಳ್ಳಿಯ ನಿವಾಸಿ ರಾಂಬಲ್ ಎನ್ನುವವರು ಕಳೆದ ಕೆಲ ತಿಂಗಳುಗಳ ಹಿಂದೆ ಭೂಮಿಗೆ ಸಂಬಂಧಿಸಿದಂತೆ ವಿವಾದ ಮಾಡಿಕೊಂಡಿದ್ದರು.  ಆ ಸಮಯದಲ್ಲಿ  ಯೋಗೇಂದ್ರ ಮತ್ತು ಜಿತೇಂದ್ರ ಗ್ರಾಮದಲ್ಲಿರಲಿಲ್ಲ. ಆದರು ಕೂಡ ಅವರಿಬ್ಬರ ಹೆಸರು ಕೋರ್ಟ್ ನೋಟಿಸ್‌ಲ್ಲಿ ನಮೂದಾಗಿತ್ತು. ಈ  ತಪ್ಪಿನ ಬಗ್ಗೆ ಯೋಗೇಂದ್ರ ಪೋಲಿಸ್ ಅಧಿಕಾರಿಗಳ ಗಮನಕ್ಕೆ ತಂದರು. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡರಾದರೂ ಆ ಸಮಸ್ಯೆ ಇತ್ಯರ್ಥವಾಗದೇ ಹಾಗೆಯೇ ಉಳಿದಿದೆ.  
 
ನಿರಪರಾಧಿ ಸಹೋದರರಿಬ್ಬರ ಹೆಸರುಗಳು ಪ್ರಮಾದವಶಾತ್  ಈ ಪ್ರಕರಣದಲ್ಲಿ  ಜೋಡಿಸಲ್ಪಟ್ಟಿವೆ ಎಂದು ಸ್ಥಳೀಯ ಪೋಲಿಸರು ದೃಢಪಡಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ  ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಇದೊಂದು ಗಂಭೀರ ತಪ್ಪು, ಈ ಕುರಿತು ನಾವು ತನಿಖೆ ನಡೆಸುತ್ತೇವೆ ಎಂದಿದ್ದಾರೆ. 
 
 ಕಾರ್ಗಿಲ್ ಯುದ್ಧದಲ್ಲಿನ ಯೋಗೇಂದ್ರ ವೀರಾವೇಶದ  ಹೋರಾಟಕ್ಕಾಗಿ  ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಂದ  ಗೌರವಿಸಲ್ಪಟ್ಟಿದ್ದರು. ಟೈಗರ್ ಹಿಲ್  ಕೈವಶ ಮಾಡಿಕೊಳ್ಳುವ ಸಮಯದಲ್ಲಿ ವೈರಿಗಳ 15 ಗುಂಡುಗಳು ಅವರ ದೇಹಕ್ಕೆ ಹೊಕ್ಕಿದ್ದವು.

ವೆಬ್ದುನಿಯಾವನ್ನು ಓದಿ