ಶಾಕಿಂಗ್: ಆಮ್ ಆದ್ಮಿ ಪಕ್ಷದ ನಾಯಕಿಗೆ ಜೀವಂತವಾಗಿ ದಹಿಸುವ ಬೆದರಿಕೆ ಪತ್ರ

ಶುಕ್ರವಾರ, 5 ಫೆಬ್ರವರಿ 2016 (19:33 IST)
ಒಂದು ವೇಳೆ, ಚತ್ತೀಸ್‌ಗಢ್‌ನ ಬಿಜಾಪುರ ಜಿಲ್ಲೆಯನ್ನು ಪ್ರವೇಶಿಸಿದಲ್ಲಿ ಜೀವಂತವಾಗಿ ದಹಿಸಲಾಗುವುದು ಎನ್ನುವ ಅನಾಮಧೇಯ ಪತ್ರ ಆಮ್ ಆದ್ಮಿ ಪಕ್ಷದ ಶಾಸಕಿಗೆ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 
 
ಆಮ್ ಆದ್ಮಿ ಪಕ್ಷದ ನಾಯಕಿ ಸೋನಿ ಸೋರಿ ಮಾವೋವಾದಿಗಳ ಪರವಾಗಿದ್ದಾರೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸೋನಿ ಸೋರಿ, ಪತ್ರದ ವಿರುದ್ಧ ದಾಂತೆವಾಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 
 
ಸೋನಿ ಸೋರಿ ಬಸ್ತಾರ್ ಪ್ರದೇಶದಲ್ಲಿರುವ ಬುಡಕಟ್ಟು ಸಮುದಾಯದ ಸಮಸ್ಯೆಗಳನ್ನು ಹೆಚ್ಚಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ವರದಿಗಳ ಪ್ರಕಾರ ಸೋರಿ, ಸರ್ಚ್ ಆಪರೇಶನ್ ನೆಪದಲ್ಲಿ ಭದ್ರತಾ ಪಡೆಗಳು ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಬಹಿರಂಗಪಡಿಸಲು ಇತ್ತೀಚೆಗೆ ಮಾವೋವಾದಿಗಳ ಬಲಾಢ್ಯತಾಣವಾದ ಬಿಜಾಪುರ ಮತ್ತು ಸುಕುಮಾ ಜಿಲ್ಲೆಗಳಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. 
 
ಸಾರ್ವಜನಿಕ ಜೀವನದಲ್ಲಿ ನಾಯಕಿಯಾಗಿ ಭದ್ರತಾ ಪಡೆಗಳಾಗಲಿ ಅಥವಾ ಮಾವೋವಾದಿಗಳಾಗಲಿ ನಡೆಸುತ್ತಿರುವ ಅನ್ಯಾಯ ಮತ್ತು ದೌರ್ಜನ್ಯವನ್ನು ಬಹಿರಂಗಪಡಿಸುವುದು ನನ್ನ ಕರ್ತವ್ಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಸೋನಿ ಸೋರಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ