ಫಲಿಸದ ಕೋಟಿ ಕೋಟಿ ಜನರ ಪ್ರಾರ್ಥನೆ, ಹಾರೈಕೆ: ಹನುಮಂತಪ್ಪ ಕೊಪ್ಪದ್ ಹುತಾತ್ಮ

ಗುರುವಾರ, 11 ಫೆಬ್ರವರಿ 2016 (13:04 IST)
ವೈದ್ಯರ ಸತತ ಪ್ರಯತ್ನ ವಿಫಲವಾಗಿದ್ದು ಬಹುಅಂಗಾಂಗ ವೈಫಲ್ಯಕ್ಕೊಳಗಾಗಿದ್ದ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಇಂದು ಬೆಳಿಗ್ಗೆ 11. 45 ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.

 
6 ದಿನಗಳ ಕಾಲ ಹಿಮದ ಅಡಿಯಲ್ಲಿ ಸಿಲುಕಿದ್ದರೂ ಪವಾಡ ಸದೃಶವಾಗಿ ಬದುಕುಳಿದಿದ್ದ ಹನುಮಂತಪ್ಪ ಕೊಪ್ಪದ್ ಅವರನ್ನು ಉಳಿಸಿಕೊಳ್ಳಲು ನವದೆಹಲಿಯ ಆರ್‌ಆರ್ ಆಸ್ಪತ್ರೆಯ ವೈದ್ಯರು ಸತತ ಮೂರು ದಿನಗಳಿಂದ ಪ್ರಯತ್ನ ನಡೆಸಿದ್ದರು. 24 ಗಂಟೆಗಳ ಕಾಲ ಅವರ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಆದರೆ ತೀವ್ರ ಕೋಮಾ ಸ್ಥಿತಿಯಲ್ಲಿದ್ದ ಅವರು ಪ್ರಜ್ಞೆಗೆ ಮರಳಿರಲಿಲ್ಲ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರ ಎರಡು ಮೂತ್ರಪಿಂಡಗಳು ಸಹ ವೈಫಲ್ಯಕ್ಕೊಳಗಾಗಿದ್ದವು.
 
ಅವರಿಗೆ ಮೂತ್ರಪಿಂಡ ದಾನ ಮಾಡುತ್ತೇವೆ ಎಂದು ಹಲವು ಜನರು ಮುಂದೆ ಬಂದಿದ್ದರು. ಆದರೆ ಕೋಮಾದಿಂದ ಮರಳದ ವೀರ ಯೋಧ ಕೊನೆಗೂ ನಮ್ಮನ್ನು ಅಗಲಿದ್ದಾರೆ.
 
ಧೀರ ಯೋಧ ಬದುಕಲೆಂದು ಅವರ ಗ್ರಾಮ ಬೆಟದೂರು ಸೇರಿದಂತೆ ದೇಶಾದ್ಯಂತ ಪೂಜೆ- ಪ್ರಾರ್ಥನೆಗಳು ನಡೆದಿದ್ದವು. ಆದರೆ ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲಿಸಲೇ ಇಲ್ಲ. ಬೆಳಿಗ್ಗಿಂದ ಪೂಜೆ-ಪ್ರಾರ್ಥನೆ, ಭಜನೆಯಲ್ಲಿ ತೊಡಗಿದ್ದ ಅವರ ಗ್ರಾಮದಲ್ಲೀಗ ಶೋಕದ ವಾತಾವರಣ ಮಡುಗಟ್ಟಿದೆ.
 
ಸಿಯಾಚಿನ್‌ನಲ್ಲಿ ನಡೆದ ಭಾರಿ ಹಿಮಪಾತದಲ್ಲಿ ಸಿಲುಕಿದ್ದ 10 ಜನರ ಪೈಕಿ ಹನುಮಂತಪ್ಪ ಕೊಪ್ಪದ ಮಾತ್ರ ಪವಾಡ ಸದೃಶವಾಗಿ ಬದುಕುಳಿದಿದ್ದರು. 

ವೆಬ್ದುನಿಯಾವನ್ನು ಓದಿ