ಹುತಾತ್ಮ ಯೋಧ ಹನುಮಂತಪ್ಪ ಅವರ ಶರೀರ ಇಂದು ರಾತ್ರಿ 9.30ರ ಸುಮಾರಿಗೆ ಸೇನಾ ವಿಮಾನದಲ್ಲಿ ಹುಬ್ಬಳ್ಳಿ ತಲುಪಲಿದೆ ಎಂದು ಹೇಳಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ, ವಿಮಾನ ನಿಲ್ದಾಣಕ್ಕೆ ತೆರಳಿ ಖುದ್ದು ಯೋಧನ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಹುತಾತ್ಮ ಹನುಮಂತಪ್ಪ ಕೊಪ್ಪದ್ ಅವರ ಶರೀರವನ್ನು ಆರ್ಆರ್ ಆಸ್ಪತ್ರೆಯಿಂದ ನವದೆಹಲಿಯ ಪೆರೇಡ್ ಮೈದಾನಕ್ಕೆ ಸ್ಥಳಾಂತರಿಸಲಾಗಿದ್ದು ಅಲ್ಲಿ ಅಂತಿಮ ನಮನ ಸಲ್ಲಿಸಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ರಕ್ಷಣಾ ಸಚಿವ ಮನೋಹರ ಪರಿಕ್ಕರ್, ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನವನ್ನು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿಯವರು ಸಹ ಯೋಧನ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಹನುಮಂತಪ್ಪ ಸೇರಿದಂತೆ ರಾಜ್ಯದ ಮೂವರು ಹುತಾತ್ಮ ಯೋಧರ ಸಾವಿಗೆ ರಾಜ್ಯ ಸರ್ಕಾರ ಸಂತಾಪ ಸೂಚಿಸುತ್ತಿದ್ದು, ಮೃತ ಯೋಧರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪರಿಹಾರದ ಮೊತ್ತ ಘೋಷಿಸುವಂತಿಲ್ಲ. ಇದರಿಂದ ಚುನಾವಣೆ ನಂತರ ಪರಿಹಾರ ಘೋಷಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.