ರಾತ್ರಿ 9.30ಕ್ಕೆ ಹುಬ್ಬಳ್ಳಿಗೆ ತಲುಪಲಿರುವ ಹುತಾತ್ಮನ ಪಾರ್ಥಿವ ಶರೀರ

ಗುರುವಾರ, 11 ಫೆಬ್ರವರಿ 2016 (16:38 IST)
ಹುತಾತ್ಮ ಯೋಧ ಹನುಮಂತಪ್ಪ ಅವರ ಶರೀರ ಇಂದು ರಾತ್ರಿ 9.30ರ ಸುಮಾರಿಗೆ ಸೇನಾ ವಿಮಾನದಲ್ಲಿ ಹುಬ್ಬಳ್ಳಿ ತಲುಪಲಿದೆ ಎಂದು ಹೇಳಲಾಗುತ್ತಿದ್ದು,  ಸಿಎಂ ಸಿದ್ದರಾಮಯ್ಯ, ವಿಮಾನ ನಿಲ್ದಾಣಕ್ಕೆ ತೆರಳಿ ಖುದ್ದು ಯೋಧನ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿ ಹನುಮಂತಪ್ಪ ಅವರ ಆರೋಗ್ಯ ವಿಚಾರಿಸಬೇಕಿತ್ತು. ಆದರೆ ಹನುಮಂತಪ್ಪ ಅವರು ಹುತಾತ್ಮರಾದ ಹಿನ್ನೆಲೆಯಲ್ಲಿ ಸಿಎಂ ಪ್ರವಾಸ ರದ್ದಾಗಿದ್ದು ಅವರು ಹುಬ್ಬಳ್ಳಿಗೆ ಪ್ರಯಾಣ ಬೆಳಿಸಿ ಹನುಮಂತಪ್ಪ ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಿದ್ದಾರೆ. 
 
ಅಂತಿಮ ಗೌರವ ಸಲ್ಲಿಸಿದ ಬಳಿಕ ಸಂಜೆ 7 ಗಂಟೆಗೆ  ಪಾಲಂ ಟೆಕ್ನಿಕಲ್ ಏರ್‌ಪೋರ್ಟ್‌ನಿಂದ ಸೇನಾ ವಿಮಾನದಲ್ಲಿ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಗೆ ರವಾನಿಸಲಾಗುವುದು. ರಾತ್ರಿ 9.30 ಕ್ಕೆ ವಿಮಾನ ಹುಬ್ಬಳ್ಳಿಯನ್ನು ತಲುಪಲಿದೆ ಎಂದು ಹೇಳಲಾಗುತ್ತಿದೆ.
 
ಹುತಾತ್ಮ ಹನುಮಂತಪ್ಪ ಕೊಪ್ಪದ್ ಅವರ ಶರೀರವನ್ನು ಆರ್‌ಆರ್ ಆಸ್ಪತ್ರೆಯಿಂದ ನವದೆಹಲಿಯ ಪೆರೇಡ್ ಮೈದಾನಕ್ಕೆ ಸ್ಥಳಾಂತರಿಸಲಾಗಿದ್ದು ಅಲ್ಲಿ ಅಂತಿಮ ನಮನ ಸಲ್ಲಿಸಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ರಕ್ಷಣಾ ಸಚಿವ ಮನೋಹರ ಪರಿಕ್ಕರ್, ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನವನ್ನು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿಯವರು ಸಹ ಯೋಧನ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. 
 
ಹನುಮಂತಪ್ಪ ಸೇರಿದಂತೆ ರಾಜ್ಯದ ಮೂವರು ಹುತಾತ್ಮ ಯೋಧರ ಸಾವಿಗೆ ರಾಜ್ಯ ಸರ್ಕಾರ ಸಂತಾಪ ಸೂಚಿಸುತ್ತಿದ್ದು, ಮೃತ ಯೋಧರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪರಿಹಾರದ ಮೊತ್ತ ಘೋಷಿಸುವಂತಿಲ್ಲ. ಇದರಿಂದ ಚುನಾವಣೆ ನಂತರ ಪರಿಹಾರ ಘೋಷಿಸುತ್ತೇವೆ  ಎಂದು ಸಿಎಂ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ