ಅಮೀರ್‌ಖಾನ್‌ಗೆ ಕಪಾಳ ಮೋಕ್ಷ ಮಾಡಿ 1 ಲಕ್ಷ ನಗದು ಬಹುಮಾನ ಪಡೆಯಿರಿ: ಶಿವಸೇನೆ ಘೋಷಣೆ

ಗುರುವಾರ, 26 ನವೆಂಬರ್ 2015 (14:12 IST)
ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಹೆಚ್ಚುತ್ತಿದೆ ಎಂದು ಹೇಳಿಕೆ ನೀಡಿದ ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ಕಪಾಳಮೋಕ್ಷ ಮಾಡಿದಲ್ಲಿ 1 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಶಿವಸೇನೆ ಘೋಷಿಸಿದೆ.  
 
ಪಂಜಾಬ್ ರಾಜ್ಯದ ಶಿವಸೇನೆ ಘಟಕದ ಮುಖ್ಯಸ್ಥ ರಾಜೀವ್ ಟಂಡನ್, ಅಮೀರ್ ಖಾನ್ ಅವರಿಗೆ ಕಪಾಳ ಮೋಕ್ಷ ಮಾಡಿದವರಿಗೆ ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. 
 
ಮುಂದಿನ ವರ್ಷ ಬಿಡುಗಡೆಯಾಗಲಿರುವ ದಂಗಾಲ್ ಚಿತ್ರದ ಶೂಟಿಂಗ್‌ಗಾಗಿ ನಗರದ ರಾಡಿಸನ್ ಬ್ಲ್ಯೂ ಹೋಟೆಲ್‌ನಲ್ಲಿ ಅಮೀರ್ ಖಾನ್ ವಾಸ್ತವ್ಯ ಹೂಡಿದ್ದಾರೆ. ಹೋಟೆಲ್ ಮುಂದೆ ಭಾರಿ ಸಂಖ್ಯೆಯಲ್ಲಿ ಸೇರಿದ ಶಿವಸೇನೆ ಬೆಂಬಲಿಗರು ಅಮೀರ್ ಖಾನ್ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಲೂಧಿಯಾನಾ ಪೊಲೀಸರು ಅಮೀರ್ ಖಾನ್ ನೀಡಿದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿ, ಪ್ರತಿಭನಾಕಾರರನ್ನು ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
 
ಬಾಲಿವುಡ್ ನಟ ಅಮೀರ್ ಖಾನ್ ನಿನ್ನೆ ಹೇಳಿಕೆಯೊಂದನ್ನು ನೀಡಿ, ಭಾರತದಲ್ಲಿ ಜನಿಸಿರುವುದಕ್ಕೆ ಹೆಮ್ಮೆಪಡುತ್ತೇನೆ. ದೇಶವನ್ನು ತೊರೆಯುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ