ವೀರಯೋಧ ಕೊಪ್ಪದ್ ಪತ್ನಿಗೆ ಉದ್ಯೋಗ ನೀಡಿದ ಸ್ಮೃತಿ ಇರಾನಿ

ಗುರುವಾರ, 9 ಮಾರ್ಚ್ 2017 (15:10 IST)
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದರೂ ಸತತ 6 ದಿನಗಳ ಕಾಲ ಜೀವವನ್ನು ಹಿಡಿದುಕೊಂಡಿದ್ದ ವೀರಯೋಧ, ಹುತಾತ್ಮ ಹನುಮಂತ ಕೊಪ್ಪದ್ ಪತ್ನಿ ಮಹಾದೇವಿಗೆ  ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಉದ್ಯೋಗ ನೀಡಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇದನ್ನು ಸ್ಪಷ್ಟ ಪಡಿಸಿದ್ದಾರೆ.

ಕೇಂದ್ರ ರೇಷ್ಮೆ ಇಲಾಖೆಯ ಮೂಲಕ ಮಹಾದೇವಿ ಅವರಿಗೆ ಆಫರ್ ಲೆಟರ್ ಕಳುಹಿಸಲಾಗಿದ್ದು, ಈ ಕೆಲಸವನ್ನು ಒಪ್ಪಿಕೊಳ್ಳುವುದಾಗಿ ಕೊಪ್ಪದ್ ಪತ್ನಿ ತಿಳಿಸಿದ್ದಾರೆ.
 
ಕಳೆದ ವರ್ಷ ಫೆಬ್ರವರಿಯಲ್ಲಿ ಸಿಯಾಚಿನ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಇನೇಕ ಸೈನಿಕರು ದುರ್ಮರಣವನ್ನಪ್ಪಿದ್ದರು. ಆದರೆ ಕೊಪ್ಪದ್ 6 ದಿನಗಳ ಬಳಿಕ ಹಿಮದಡಿಯಲ್ಲಿ ಜೀವಂತವಾಗಿ ಸಿಕ್ಕಿ ಸಂಪೂರ್ಣ ದೇಶಕ್ಕೆ ಆಶ್ಚರ್ಯ ಮತ್ತು ಹೆಮ್ಮೆಯುಂಟಾಗುವಂತೆ ಮಾಡಿದ್ದರು. ಕೋಮಾ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. 
 
ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನೀಡಿತ್ತು ತಮ್ಮ ಪತಿಯ ಸಾವಿನಿಂದ ಜರ್ಜರಿತವಾಗಿದ್ದರೂ ಆತನ ಶೌರ್ಯ, ತ್ಯಾಗಕ್ಕೆ ಅಭಿಮಾನ ವ್ಯಕ್ತ ಪಡಿಸಿದ್ದ ಪತ್ನಿ ತನ್ನ ಮಗಳನ್ನು ಸಹ ತಂದೆಯಂತೆ ಮಿಲಿಟರಿಗೆ ಸೇರಿಸುವುದಾಗಿ ಹೇಳಿದ್ದರು.
 
ರಾಜ್ಯ ಸರ್ಕಾರ ಹನುಮಂತಪ್ಪ ಕೊಪ್ಪದ್ ಪರಿವಾರಕ್ಕೆ 25 ಲಕ್ಷ ರೂಪಾಯಿ ಪರಿಹಾರ, 4 ಎಕರೆ ಜಮೀನು ನೀಡಿತ್ತು. ಅಲ್ಲದೇ ಕೊಪ್ಪದ್ ಅವರ ಪತ್ನಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅದು ಒಂದು ವರ್ಷವಾದರೂ ಭರವಸೆಯಾಗಿಯೇ ಉಳಿದಿತ್ತು.

ವೆಬ್ದುನಿಯಾವನ್ನು ಓದಿ