ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಝಡ್‌ ಶ್ರೇಣಿಯ ಭದ್ರತೆ

ಗುರುವಾರ, 4 ಫೆಬ್ರವರಿ 2016 (18:42 IST)
ಕಳೆದ ತಿಂಗಳು ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆಯ ನಂತರ ವಿದ್ಯಾರ್ಥಿಗಳು ದೇಶಾದ್ಯಂತ ಪ್ರತಿಭಟನೆಯಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿಗೆ ಝಡ್‌ ಭದ್ರತೆ ನೀಡಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.
 
ಸ್ಮೃತಿ ಇರಾನಿ ಕೇಂದ್ರ ಸಚಿವೆಯಾಗಿದ್ದರೂ ವೈ-ಕೆಟಗೆರಿ ಭದ್ರತೆಯನ್ನು ಹೊಂದಿದ್ದಾರೆ. ಕೇಂದ್ರ ಸರಕಾರ ಝಡ್‌ ಭದ್ರತೆಯನ್ನು ಒದಗಿಸಲು ನಿರ್ಧರಿಸಿದ್ದು, ಸದಾ ಕಾಲ 20 ಭದ್ರತಾ ಸಿಬ್ಬಂದಿ ಅವರ ರಕ್ಷಣೆಗೆ ಕಾವಲಿರುತ್ತಾರೆ.
 
ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳ ಪ್ರಕಾರ, ದೇಶಾದ್ಯಂತ ವಿದ್ಯಾರ್ಥಿಗಳು ಕೇಂದ್ರ ಸಚಿವೆ ಸ್ಮತಿ ಇರಾನಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರಿಂದ ಕೆಲ ವಿಚ್ಚಿದ್ರಕಾರಿ ಶಕ್ತಿಗಳು ಇದರಿಂದ ಲಾಭ ಪಡೆದು ಸಚಿವೆಯ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಅವರ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. 
 
ಪ್ರಸ್ತುತ ಕೆಲವೇ ಸಚಿವರು ಝಡ್‌ ಮತ್ತು ಝಡ್‌ ಪ್ಲಸ್ ಭದ್ರತೆಯನ್ನು ಹೊಂದಿದ್ದಾರೆ. ಝಡ್‌ ಪ್ಲಸ್ ಭದ್ರತೆಯನ್ನು ಹೊಂದಿದವರಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತಸಚಿವ ಅರುಣ್ ಜೇಟ್ಲಿ, ಸಾರಿಗೆ ಸಚಿವ ನಿತಿನ್ ಗಡ್ಕರಿ, ಕೇಂದ್ರದ ರಾಜ್ಯ ಗೃಹ ಸಚಿವ ಕಿರೆನ್ ರಿಜಿಜು, ಜಿತೇಂದ್ರ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿದ್ದಾರೆ. 
 
ಬೆದರಿಕೆಯ ಆಧಾರದ ಮೇಲೆ ವಿಐಪಿಗಳ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ. ಸಚಿವೆ ಸ್ಮೃತಿ ಇರಾನಿಯವರಿಗೆ ವಿದ್ಯಾರ್ಥಿಗಳ ಬೆದರಿಕೆಯಿರುವುದರಿಂದ ಅವರ ಭದ್ರತೆಯನ್ನು ಝಡ್‌ ಶ್ರೇಣಿಗೆ ಹೆಚ್ಚಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ