ಸೋನಿಯಾ ಮಹಾನ್ ನಾಯಕಿಯಾದರೂ, ಅವರಿಗೆ ಭಾರತರತ್ನ ನೀಡಬೇಕೆಂಬ ಆಕಾಂಕ್ಷೆಯಿಲ್ಲ: ಕಾಂಗ್ರೆಸ್

ಶನಿವಾರ, 28 ಮಾರ್ಚ್ 2015 (15:16 IST)
ಸೋನಿಯಾ ಗಾಂಧಿ ಮಹಾನ್ ನಾಯಕಿ, ಅವರು ಕೋಟ್ಯಾಂತರ ಜನರಿಂದ ಆರಾಧಿಸಲ್ಪಡುತ್ತಾರೆ. ಆದರೆ ಅವರಿಗೆ ಭಾರತ ರತ್ನ ನೀಡಬೇಕೆಂದು ನಾವೇನು ಕೇಳುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋನಿಯಾ ಅಭಿನಂದಿಸಿದ್ದಾರೆ. 
 
ರಾಷ್ಟ್ರೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ವಾಜಪೇಯಿ ಅವರು ತೋರಿರುವ ಕೌಶಲ್ಯ ಮತ್ತು ಬದ್ಧತೆಗೆ ಸಂದ ಫಲ ಈ ಭಾರತ ರತ್ನ ಪ್ರಶಸ್ತಿ ಎಂದಿರುವ ಸೋನಿಯಾ, "ನಿಮ್ಮ ವಿಶಾಲ ಮತ್ತು ಉದಾರ ಹೃದಯದ ದೃಷ್ಟಿ, ದೇಶಭಕ್ತಿ ಮತ್ತು ನಿರರ್ಗಳ ಮಾತಿನ ಚಾಕಚಕ್ಯತೆಯನ್ನು ಇಡೀ ರಾಜಕೀಯ ಸಮುದಾಯ ಮತ್ತು ನಮ್ಮ ಸಮಾಜದ ಎಲ್ಲ ವರ್ಗಗಳು ಒಪ್ಪಿಕೊಂಡಿವೆ," ಎಂದು ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.
 
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್  ತಮ್ಮ ಪಕ್ಷದ ಕಾರ್ಯಕರ್ತರು ಸೋನಿಯಾರವರಿಗೂ ಭಾರತರತ್ನ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದರು. 
 
ಸೋನಿಯಾ ಕೋಟ್ಯಾಂತರ ಜನರ ಮನಸಲ್ಲಿ ಮನೆ ಮಾಡಿದ್ದಾರೆ. ಅವರು ತಮ್ಮದೇ ಆದ ಘನತೆ ಮತ್ತು ಗೌರವವನ್ನು ಹೊಂದಿದ್ದಾರೆ. ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿ ಮಾಡಿದಾಗ ಯಾವಾಗಲೂ ಅವರು ಮೇಲಿನ ಸ್ಥಾನದಲ್ಲಿರುತ್ತಾರೆ. ಆದರೆ ಸೋನಿಯಾರಿಗೂ ಭಾರತ ರತ್ನ ನೀಡಲಿ ಎಂಬ ಮಹತ್ವಾಕಾಂಕ್ಷೆಯನ್ನು ನಾವು ಹೊಂದಿಲ್ಲ. ಸೋನಿಯಾರವರದು ರಾಷ್ಟ್ರೀಯ ಮಟ್ಟದಲ್ಲಲ್ಲ , ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೋಲಿಸಲಾಗದ ವ್ಯಕ್ತಿತ್ವ, "ಎಂದು ಕಾಂಗ್ರೆಸ್ ವಕ್ತಾರೆ ರೀಟಾ ಜೋಶಿ ಹೇಳಿದ್ದಾರೆ.
 
"ಸಮಾರಂಭದಲ್ಲಿ ಸೋನಿಯಾ ಭಾಗವಹಿಸುತ್ತಿಲ್ಲವೇಕೆ?, ಎಂದು ಕೇಳಿದಾಗ ಅವರನ್ನು ಆಹ್ವಾನಿಸಿಲ್ಲ", ಎಂದು ಅವರು ಉತ್ತರಿಸಿದರು. 

ವೆಬ್ದುನಿಯಾವನ್ನು ಓದಿ