ಕಳೆಗುಂದಿರುವ ಕಾಂಗ್ರೆಸ್‌ಗೆ ಸೋನಿಯಾ, ರಾಹುಲ್ ಮರುಜೀವ ನೀಡಬೇಕು: ಪಿ. ಚಿದಂಬರಮ್

ಶನಿವಾರ, 25 ಅಕ್ಟೋಬರ್ 2014 (13:41 IST)
ಕಾಂಗ್ರೆಸ್ ಗಂಭೀರ ರೀತಿಯಲ್ಲಿ ಸ್ಥೈರ್ಯಗೆಟ್ಟಿದೆ ಎಂದು ಒತ್ತಿ ಹೇಳಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್  ಪಕ್ಷವನ್ನು ಈ ಕೆಟ್ಟ ಸ್ಥಿತಿಯಿಂದ ಮೇಲೆತ್ತಲು ಸೋನಿಯಾ ಗಾಂಧಿಯವರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಹೆಚ್ಚೆಚ್ಚು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಬೇಕು ಎಂದು ಹೇಳಿದ್ದಾರೆ. 
 
ಖಾಸಗಿ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಮಾಜಿ ವಿತ್ತ ಸಚಿವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಅಥವಾ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಚ್ಚು ಮಾತನಾಡಬೇಕು ಎಂದು ನಾನು ವಿನಂತಿಸಿಕೊಳ್ಳುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಬೇಕು ಅಥವಾ ಮಾಧ್ಯಮದವರನ್ನು ಭೇಟಿಯಾಗಬೇಕು. ಅವರಿದನ್ನು ಮಾಡಲೇಬೇಕು ಎಂಬುದು ನನ್ನ ಕೋರಿಕೆ ಎಂದು ಹೇಳಿದ್ದಾರೆ.  
 
ಇತ್ತೀಚಿನ ದಿನಗಳಲ್ಲಿ ನೆಹರು-ಗಾಂಧಿ ಕುಟುಂಬದವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲವೆಂದು ಪಕ್ಷದೊಳಗೆ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಚಿದಂಬರಮ್ ಈ ಹೇಳಿಕೆಯನ್ನು ನೀಡಿದ್ದಾರೆ. 
 
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಇತ್ತೀಚೆಗೆ ಕೊನೆಗೊಂಡ ಚುನಾವಣೆಗಳ ಪ್ರಚಾರ ಸಂದರ್ಭದಲ್ಲಿ ಕೂಡ ಸೋನಿಯಾ ಮತ್ತು ರಾಹುಲ್ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. 

ವೆಬ್ದುನಿಯಾವನ್ನು ಓದಿ