'ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಿವಸೇನೆಯ ಜತೆ ಮೈತ್ರಿ ಕಡಿದುಕೊಂಡಿದ್ದು ಬಿಜೆಪಿಗೆ ಸಹಾಯಕವಾಯಿತು. ಆದರೆ ಕೇಸರಿ ಪಕ್ಷಗಳ ಮೈತ್ರಿ ಮುರಿದಿದೆ ಎಂಬುದು ಇದರ ಅರ್ಥವಲ್ಲ', ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
"ನಾವು ನಮ್ಮ ಮಿತ್ರ ಪಕ್ಷದೊಂದಿಗೆ ಭವಿಷ್ಯದಲ್ಲಿ ಸಹ ಚುನಾವಣೆಯನ್ನೆದುರಿಸಲಿದ್ದೇವೆ. ವಿಧಾನಸಭೆ ಚುನಾವಣೆ ಪೂರ್ವ ಮೈತ್ರಿ ಕಡಿದುಕೊಂಡಿದ್ದು ನಮ್ಮ ಗೆಲುವಿಗೆ ನೆರವಾಯಿತು. ಆದರೆ ನಮ್ಮ ಗೆಳೆತನ ಕಡಿತಗೊಳ್ಳಲಿದೆ", ಎಂಬುದು ಇದರ ಅರ್ಥವಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಶಿವಸೇನೆ ಅದರ ಮೈತ್ರಿಕೂಟದಲ್ಲಿತ್ತು. ಆದರೆ ಮಹಾರಾಷ್ಟ್ರ ವಿಧಾನಸಭೆ ವೇಳೆ ಸೀಟು ಹಂಚಿಕೆಯಲ್ಲಾದ ಭಿನ್ನಾಭಿಪ್ರಾಯಗಳಿಂದಾಗಿ ಅದು ಬಿಜೆಪಿಯ ಜತೆಗೆ ಸಂಬಂಧ ಕಡಿದುಕೊಂಡಿತ್ತು. ಚುನಾವಣೆ ನಂತರ ಅದು ಮತ್ತೆ ಬಿಜೆಪಿಯ ಜತೆ ಕೈ ಜೋಡಿಸಿತು. ಆದರೆ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಕೂಡ ಅದು ತನ್ನ ಮಿತ್ರ ಪಕ್ಷದ ಕೆಲವು ಯೋಜನೆಗಳ ವಿರುದ್ಧ ಕಟು ಟೀಕೆಯನ್ನು ನಿಲ್ಲಿಸಿಲ್ಲ. ಭೂ ಸ್ವಾಧೀನ ಮಸೂದೆ, ಜೈಟಾಪುರ್ ನೂಕ್ಲಿಯರ್ ಪ್ಲಾಂಟ್ ಮತ್ತು ರೈತರ ಆತ್ಮಹತ್ಯೆ ಕುರಿತಂತೆ ಅದು ಬಿಜೆಪಿ ಸರಕಾರಕ್ಕೆ ಅವ್ಯಾಹತವಾಗಿ ಚಾಟಿಯೇಟು ಬೀಸುತ್ತಿದೆ.