ಚಾಕುವಿನಿಂದ ಇರಿತ: ಒಂದು ಸಾವು, ಇಬ್ಬರ ಸ್ಥಿತಿ ಗಂಭೀರ

ಸೋಮವಾರ, 6 ಜುಲೈ 2015 (09:34 IST)
ರಾತ್ರಿ ಊಟ ಮುಗಿಸಿ ಮಾತನಾಡುತ್ತ ಕುಳಿತಿದ್ದ ಮೂವರು ಸ್ನೇಹಿತರ ಮೇಲೆ ದುಷ್ಕರ್ಮಿಗಳ ತಂಡವೊಂದು ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ತೀವೃವಾಗಿ ಗಾಯಗೊಂಡಿದ್ದ ಮೂವರಲ್ಲಿ ದೀಪಕ್ (21) ಎಂಬಾತ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು, ಮತ್ತಿಬ್ಬರಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.

ಗೋಪನಕೊಪ್ಪದ ರೋಟರಿ ಶಾಲೆಯ ಮುಂದೆ ಮೂವರು ಸ್ನೇಹಿತರಾದ ಮಲ್ಲೇಶಿ, ಸೊಹೈಲ್ ಮತ್ತು ದೀಪಕ್ ಮಾತನಾಡುತ್ತ ಕುಳಿತಿದ್ದರು. ಆ ಸಮಯದಲ್ಲಿ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಸೊಹೈಲ್ ಮೇಲೆ ಮೊದಲು ದಾಳಿ ನಡೆಸಿದ್ದಾರೆ. ನಂತರ ಇತರ ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾರೆ. ಸ್ನೇಹಿತರ ಆರ್ತನಾದ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 
 
ಚಾಕುವಿನ ಇರಿತಕ್ಕೆ  ಸೋಹೆಲ್ ಕರುಳು  ಕಿತ್ತು ಹೊರಗೆ ಬಂದಿದೆ. ದೀಪಕ್‌ ಎಂಬಾತನ ಕುತ್ತಿಗೆಗೆ, ಮಲ್ಲೇಶಿಯ ಬೆನ್ನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿತ್ತು.  
 
ಮೂವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ್ವರ ಕಾಲೋನಿ ನಿವಾಸಿ ದೀಪಕ್ ಸಾವಿಗೀಡಾಗಿದ್ದಾನೆ.
 
ಈ ಘಟನೆ ಹಳೆ ದ್ವೇಷದಿಂದ ನಡೆದಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. 
 
ಈ ಕುರಿತಂತೆ ಕೇಶ್ವಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ