ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡದ ಜಯಾ: ಎಂ.ಕೆ. ಸ್ಟಾಲಿನ್ ವಾಗ್ದಾಳಿ

ಮಂಗಳವಾರ, 24 ನವೆಂಬರ್ 2015 (18:36 IST)
ತಮಿಳುನಾಡಿನ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡದ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
 
ಸಿಎಂ ಜಯಲಲಿತಾ ತಮ್ಮ ಸ್ವಕ್ಷೇತ್ರವಾದ ಆರ್.ಕೆ.ನಗರ್ ಕ್ಷೇತ್ರವೊಂದನ್ನು ಬಿಟ್ಟಲ್ಲಿ ಯಾವುದೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಲ್ಲಿ ವಿಫಲವಾಗಿದ್ದಾರೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಜನರು ಸಂಕಷ್ಟದಲ್ಲಿ ಸಿಲುಕಿದ್ದರೂ ಅವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
 
ಸ್ಟಾಲಿನ್, ಹಿರಿಯ ಡಿಎಂಕೆ ನಾಯಕರಾದ ಎಸ್.ದೊರೈಮುರುಗನ್ ಮತ್ತು ಐ ಪೆರಿಯಾಸಾಮಿ ಅವರೊಂದಿಗೆ ಸಚಿವಾಲಯಕ್ಕೆ ತೆರಳಿ ಹಣಕಾಸು ಕಾರ್ಯದರ್ಶಿಗೆ ಪ್ರವಾಹ ಪೀಡಿತರಿಗಾಗಿ ಬಳಸುವಂತೆ 1 ಕೋಟಿ ರೂ.ಗಳ ಚೆಕ್ ನೀಡಿದರು ಎಂದು ಮೂಲಗಳು ತಿಳಿಸಿವೆ.
   
ಡಿಎಂಕೆ ಪರಿಹಾರಧನವನ್ನು ಪಡೆದು ಜನತೆಗಾಗಿ ಬಳಸಿಕೊಳ್ಳುವಲ್ಲಿ ಕೂಡಾ ರಾಜ್ಯ ಸರಕಾರ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಆರೋಪಿಸಿದ ಮಾರನೇ ದಿನ ಸ್ಟಾಲಿನ್ ಜಯಾ ಸರಕಾರಕ್ಕೆ 1 ಕೋಟಿ ರೂಪಾಯಿಗಳ ಪರಿಹಾರ ನಿಧಿ ನೀಡಿದ್ದಾರೆ.
 
ಮುಖ್ಯಕಾರ್ಯದರ್ಶಿ ಕೆ.ಜ್ಞಾನದೇಸಿಕನ್ ಅವರನ್ನು ಭೇಟಿ ಮಾಡಿ ಹಣದ ಚೆಕ್ ನೀಡಲು ಹಲವಾರು ಬಾರಿ ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ದೊರೆಯಲಿಲ್ಲ. ಇದು ರಾಜಕೀಯ ವಿಷಯವಲ್ಲ. ಒಂದು ವೇಳೆ, ಹಣವನ್ನು ಸರಕಾರ ಸ್ವೀಕರಿಸದಿದ್ದಲ್ಲಿ ಮಾಧ್ಯಮಗಳ ಮುಂದೆ ಹೋಗುವುದಾಗಿ ಹೇಳಿಕೆ ನೀಡಿದ ನಂತರ ಡಿಎಂಕೆ ನೀಡಿದ ಚೆಕ್ ಸರಕಾರ ಸ್ವೀಕರಿಸಿತು ಎಂದು ಸ್ಟಾಲಿನ್ ಬೇಸರ ವ್ಯಕ್ತಪಡಿಸಿದ್ದಾರೆ. 
 
ಕೇಂದ್ರ ಸರಕಾರ ಈಗಾಗಲೇ 939.63 ಕೋಟಿ ರೂಪಾಯಿಗಳ ಪ್ರವಾಹ ಪ್ರಕೋಪ ನಿಧಿಯನ್ನು ನೀಡಿದ್ದು, ಸರ್ವಪಕ್ಷಗಳ ಸಮಿತಿ ಹಣವನ್ನು ವಿತರಿಸಿದಲ್ಲಿ, ಪ್ರತಿಯೊಬ್ಬ ಪ್ರವಾಹ ಪೀಡಿತರಿಗೆ ನ್ಯಾಯ ದೊರೆಯಲಿದೆ ಎಂದು ಸ್ಟಾಲಿನ್ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ